ಮಳೆ ಬಿದ್ದು ಭೂಮಿ ತಂಪಾದರೆ ಸಾಕು, ಇಡೀ ಹಳ್ಳಿಯ ಚಹರೆಯೇ ಬದಲಾಗುತ್ತದೆ. ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಪ್ರಕೃತಿಯಲ್ಲಿ ಹೊಸ ಚೈತನ್ಯವನ್ನು ತುಂಬಿಕೊಳ್ಳುತ್ತದೆ.
ಬೇಸಿಗೆ ಬೇಗೆಗೆ ಬಿರುಕು ಬಿಟ್ಟ ಗದ್ದೆಗಳಿಗೆ ಮಳೆಯ ಹನಿ ಬೀಳುತ್ತಿದ್ದಂತೆ ಭತ್ತದ ಬೆಳೆಗಾರರಿಗೆ ಕೈ ತುಂಬಾ ಕೆಲಸ. ಗದ್ದೆಯ ಉಳುಮೆ, ಬೀಜ ಬಿತ್ತನೆ, ನೇಜಿ ನಾಟಿ —ಹೀಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ರೈತರ ಮುಂದಿರುತ್ತವೆ. ಮುಂಗಾರಿನ ಈ ದಿನಗಳು ಹಳ್ಳಿಯ ಜನರಿಗೆ ಕೇವಲ ದುಡಿಮೆಯಲ್ಲ, ಅದೊಂದು ಸಂಭ್ರಮ
ಭತ್ತದ ಗದ್ದೆಗಳನ್ನು ಉಳುಮೆ ಮಾಡುವುದಕ್ಕೆ ಹಿಂದಿನ ದಿನಗಳಲ್ಲಿ ಎತ್ತು ಕೊಣಗಳಿದ್ದವು. ಪ್ರತೀ ಮನೆಯಲ್ಲಿ ಒಂದೆರಡು ಜೊತೆ ಎತ್ತು ಅಥವಾ ಕೋಣಗಳನ್ನು ಸಾಕಿ, ತಾವೇ ಉಳುಮೆ ಮಾಡುತ್ತಿದ್ದರು. ಬೆಳ್ಳಂಬೆಳಗೆ ತನ್ನ ಕೋಣ, ಎತ್ತುಗಳನ್ನು ಗದ್ದೆಗೆ ಒಯ್ದು ನೊಗ ನೇಗಿಲನ್ನು ಕಟ್ಟಿ ಬಾರ್ಕೋಲು ಹಿಡಿದು, ಉಳಮೆಯ ಹಾಡು ಹಾಡುತ್ತಿದ್ದರೆ ದಣಿವು ಮರೆಯಾಗುತ್ತದೆ. ಎತ್ತು, ಕೋಣಗಳೂ ಆತನ ಭಾಷೆಯನ್ನು ಅರ್ಥೈಸಿಕೊಂಡು ಸಾಗುತ್ತವೆ. ರೈತನ ಹಾಡು, ಎತ್ತಿನ ಕೊರಳಲ್ಲಿ ಗಂಟೆಯಿದ್ದರೆ ಅದರ ಮಧುರ ನಾದ, ಬೆಳ್ಳಕ್ಕಿ ಸಾಲು…..ಅದೊಂದು ದೃಶ್ಯ. ಕಾವ್ಯ.
ಇಂದು ಹಳ್ಳಿಗಳ ಕೃಷಿ ಪದ್ಧತಿ ಯಾಂತ್ರಿಕವಾಗಿದೆ. ಎತ್ತು, ಕೋಣಗಳ ಸ್ಥಾನವನ್ನು ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್ಗಳು ಆಕ್ರಮಿಸಿಕೊಂಡಿವೆ. ಮಾನವ ಶ್ರಮ ಕಡಿಮೆಯಾಗಿದೆ. ಸಮಯದ ಉಳಿತಾಯವಾಗುತ್ತಿದೆ. ಆದರೂ ಕೆಲವು ಕಡೆಗಳಲ್ಲಿ ಸಾಂಪ್ರದಾಯಿಕ ಉಳುಮೆ ಉಳಿದಿದೆ. ಕೃಷಿಯಲ್ಲಿದ್ದ ಭಾವನಾತ್ಮಕ ಸಂಬAಧವನ್ನು ಮಾಸದಂತೆ ಮಾಡಿದೆ.
ಚಿತ್ರ : ರಾಮ್ ಅಜೆಕಾರ್







