ಬರಹ: ಹರಿದಾಸ ಬಿ.ಸಿ.ರಾವ್, ಶಿವಪುರ(ಹೆಬ್ರಿ)
ಹಿಂದೂ ಸಂಸ್ಕೃತಿಯಲ್ಲಿ ಗರಿಕೆ ಹುಲ್ಲಿಗೆ ವಿಶೇಷ ಮಾನ್ಯತೆ ಇದೆ. ಅಗ್ರ ಪೂಜಿತನಾದ ಗಣಪತಿಯ ಪೂಜೆಗೆ ಗರಿಕೆ ಹುಲ್ಲು ಬೇಕು. ಎಲ್ಲಾ ಹುಲ್ಲಿನಂತೆ ಬರಗಾಲದಲ್ಲಿ ಈ ಹುಲ್ಲಿನ ಬೇರು ಸಹಿತ ನಾಶವಾಗುವುದಿಲ್ಲ. ಒಂದು ಮಳೆಯಾದರೆ ಸಾಕು ಕೂಡಲೇ ಚಿಗುರಿ ನಳನಳಿಸುತ್ತದೆ. ಇದು ಆಧ್ಯಾತ್ಮಿಕ ಹಿರಿಮೆ. ಔಷಧವಾಗಿಯೂ ಆಯುರ್ವೇದ ವೈದ್ಯ ವಿಜ್ಞಾನದಲ್ಲಿ ಗರಿಕೆ ಹುಲ್ಲನ್ನು ಔಷಧವಾಗಿ ಬಳಸಲಾಗುತ್ತದೆ. ನಮ್ಮ ಹಳ್ಳಿ ಕಡೆ ಒಂದು ಮಾತು ಈಗಲೂ ಚಾಲ್ತಿಯಲ್ಲಿದೆ. ಅದೇನು? “ಔಷಧಿಯ ಗುಣವಿಲ್ಲದ ಸಸ್ಯ ವರ್ಗಗಳೇ ಇಲ್ಲ”. ಆದರೆ ನಮಗೆ ಮಾತ್ರ ಅವುಗಳ ಪರಿಚಯವೇ ಈಗ ಇಲ್ಲದಾಗಿದೆ. ಒಂದು ಕಾಲದಲ್ಲಿ ಗಿಡಮೂಲಿಕೆಗಳು, ಸೊಪ್ಪು, ತೊಗಟೆ, ಬೇರುಗಳೇ ಜೀವರಕ್ಷಕವಾಗಿದ್ದವು. ಹಳ್ಳಿ ಹಳ್ಳಿಯಲ್ಲೂ ನಾಟಿ ವೈದ್ಯರು ಇರುತ್ತಿದ್ದರು.

ಬಹುತೇಕ ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆಯ ಅಡುಗೆ ಮನೆಯ ಸಾಂಬಾರು ಪೆಟ್ಟಿಗೆಯ ಧಾನ್ಯಗಳೇ ಔಷಧವಾಗುತ್ತಿದ್ದವು.. ಔಷಧದ ಜೊತೆಗೆ ಕಠಿಣ ಪಥ್ಯವನ್ನು ಪಾಲಿಸಲೇಬೇಕಿತ್ತು. ಯಾವಾಗ ಅಲೋಪಥಿ ಚಿಕಿತ್ಸಾ ಪದ್ಧತಿ ನಮ್ಮಲ್ಲಿ ಜನಪ್ರಿಯವಾಯಿತೋ, ಗಿಡಮೂಲಿಕಾ ಪದ್ಧತಿ ನಿಧಾನವಾಗಿ ತೆರೆಯ ಮರೆಗೆ ಸರಿಯಿತು ಎಂದರೆ ತಪ್ಪಾಗಲಾರದು. ಈಗ ಹೆಚ್ಚೆಚ್ಚೂ ವೈದ್ಯರು ಲಭ್ಯರಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಔಷಧ ಅಂಗಡಿಗಳು ತೆರೆಯಲ್ಪಟ್ಟಿವೆ. ಆದರೂ ಹೊಸ ಹೊಸ ಕಾಯಿಲೆಗಳು ಸೃಷ್ಟಿಯಾಗುತ್ತಿವೆ. ಆಧುನಿಕ ವೈದ್ಯ ವಿಜ್ಞಾನ ಪದ್ಧತಿ ಎಷ್ಟೇ ಬೆಳೆದಿರಲಿ, ಸಸ್ಯ ಸಂಪತ್ತಿನ ಮಹತ್ವ ಕಡಿಮೆಯಾಗಿಲ್ಲ. ಈ ಲೇಖನದಲ್ಲಿ ಗರಿಕೆ ಹುಲ್ಲಿನ ಔಷಧೀಯ ಗುಣವನ್ನು ನಾನು ಓದಿದ್ದು ಸಂಗ್ರಹಿಸಿ ಬರಹ ರೂಪದಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.
ಗರಿಕೆ ಹುಲ್ಲು ಇದೊಂದು ಅದ್ಭುತ ನೈಸರ್ಗಿಕ ಔಷಧ. ಮನೆಯ ಸುತ್ತ ಮುತ್ತ ಸುಲಭವಾಗಿ ಸಿಗುತ್ತದೆ. ಹಿತ್ತಿಲ ಹುಲ್ಲು ಔಷಧವೆಂದು ನಮಗೆ ಗೊತ್ತಿಲ್ಲ ಅಷ್ಟೇ. ಈ ಹುಲ್ಲಿನಲ್ಲಿ ಕ್ಯಾಲ್ಸಿಯಂ, ಫೈಬರ್, ಪೊಟ್ಯಾಷಿಯಂ, ಮತ್ತು ಪ್ರೋಟೀನ್ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಕೈಯಿಂದಲೇ ಬೇರು ಸಹಿತ ತೆಗೆಯದಲೇ ಚಿವುಟಿ ಕೊಯ್ದಷ್ಟು ಚಿಗುರುತ್ತದೆ.

ಗರಿಕೆ ಹುಲ್ಲಿನ ಪ್ರಮುಖ ಆರೋಗ್ಯ ಪ್ರಯೋಜನಗಳು
ಮಧುಮೇಹ ಮತ್ತು ಬಿ.ಪಿ. ನಿಯಂತ್ರಿಸುವ ಶಕ್ತಿ ಗರಿಕೆ ಹುಲ್ಲಿನಲ್ಲಿ ಹೆಚ್ಚು ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದರ ಜ್ಯೂಸನ್ನು ನಿಯಮಿತವಾಗಿ ಕುಡಿಯುವುದರಿಂದ. ಅಧಿಕ ರಕ್ತದೊತ್ತಡ ಕೂಡಾ ನಿಯಂತ್ರಣಕ್ಕೆ ತರಲು ಸಹಕಾರಿ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ವಿವಿಧ ವೈರಸ್ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ಉರಿ, ತುರಿಕೆ, ಇತರ ಸಮಸ್ಯೆಗಳಿದ್ದರೆ ಗರಿಕೆ ಹುಲ್ಲಿನ ರಸಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉಪಶಮನ ಸಿಗುತ್ತದೆ. ಚರ್ಮದ ಮೇಲಿನ ತುರಿಕೆ, ದದ್ದುಗಳು ಸಣ್ಣಪುಟ್ಟ ಗಾಯಗಳು ಇದ್ದರೆ ಗರಿಕೆ ಹುಲ್ಲನ್ನು ಅರೆದು ಆ ಜಾಗಕ್ಕೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.
ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮತ್ತು ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಇದು ದೇಹದಲ್ಲಿರುವ ರಕ್ತ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ರಕ್ತಹೀನತೆ, ಸುಸ್ತು ಮತ್ತು ಶಕ್ತಿಹೀನತೆಯಿಂದ ಬಳಲುವವರಿಗೆ ಇದು ರಾಮಬಾಣ. ಮನೆಯ ಹಿತ್ತಲಲ್ಲಿ/ಗಿಡದ ಮಧ್ಯೆ ಬೆಳೆದ ಸ್ವಚ್ಛವಾದ ಗರಿಕೆಯನ್ನು ಹುಲ್ಲನ್ನು ಬಳಸಿಕೊಂಡು ಜ್ಯೂಸ್ ತಯಾರಿಸಬಹುದು.









