spot_img
Saturday, July 27, 2024
spot_imgspot_img
spot_img
spot_img

ಕೃಷಿಯಲ್ಲಿ ನೀವು ಅರಿತಿರಲೇಬೇಕಾದ ಕಳಿತ ಗೊಬ್ಬರದ ಗುಟ್ಟು!: -ಎಂ.ಟಿ. ಶಾಂತಿಮೂಲೆ ಬರಹ

ಮನುಷ್ಯ ಯಾಕೆ ಆಹಾರ ಸೇವಿಸಬೇಕು? ಆಹಾರದ ಜೊತೆಗೆ ನೀರು ಯಾಕಿರಬೇಕು! ಸೇವಿಸುವ ಆಹಾರ ಪೌಷ್ಟಿಕವಾಗಿ ಯಾಕಿರಬೇಕು? ಎಷ್ಟು ಪ್ರಮಾಣ ಆಹಾರ ಸೇವಿಸಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಉತ್ತರ ಸಿಗಲು ವೈದ್ಯರೇ ಬರಬೇಕು ಎನ್ನುವ ಸ್ಥಿತಿ ಇಂದು ನಮ್ಮ ಸಮಾಜದಲ್ಲಿದೆ. ಇದು ಇಂದಿನ ಪೀಳಿಗೆ ಅನುಸರಿಸುತ್ತಿರುವ ಅತ್ಯಂತ ಕೆಟ್ಟ ಆಹಾರ ಪದ್ಧತಿ.

ಈ ಪದ್ಧತಿಗೆ ಮುಕ್ತಿ ಸಿಗುವುದು ಮುಂದೆ ಮಧುಮೇಹ, ರಕ್ತದೊತ್ತಡ, ಆಸ್ತಮಾ, ಅಲರ್ಜಿ ಮುಂತಾದ ಕೆಟ್ಟ ಕಾಯಿದೆಗಳು ವಕ್ರಿಯಿಸಿದಾಗ ಖಾಯಿಲೆ ಬಂದ ಮೇಲೆ ಔಷಧ ಸೇವಿಸುವುದರ ಬದಲಿಗೆ ಯಾವುದೇ ಖಾಯಿಲೆ ಬರದಂತೆ ನೋಡಿಕೊಳ್ಳುವುದು ಜಾಣತನ. ಈ ವಿಚಾರ ಇಲ್ಲಿ ಪ್ರಕಟಿಸುವುದಕ್ಕೊಂದು ಮುಖ್ಯ ಕಾರಣವಿದೆ. ಅದೇ ಸಸ್ಯ ಸಾಮ್ರಾಜ್ಯಕ್ಕೂ, ಪ್ರಾಣಿ ಸಾಮ್ರಾಜ್ಯ ಪ್ರಪಂಚಕ್ಕೂ ಇರುವ ಸಾಮ್ಯತೆ. ಈ ವಿಚಾರವಾಗಿ ಅಳೆದು ತೂಗಿ ನೋಡಿದರೆ ಇದರ ಹಿಂದಿರುವ ಸತ್ಯದ ಅರಿವಾಗಬಹುದು

ರೋಗ ಪೀಡಿತ ಸಸ್ಯಗಳಿಂದ ದಕ್ಕಿದ ವಸ್ತುಗಳನ್ನು ಆಹಾರವಾಗಿ ಬಳಸಿದಾಗ ಬಳಕೆದಾರನಿಗೂ ಒಂದಿಷ್ಟು ರೋಗದ ಫಲ ಸಿಗಬಹುದು. ಒಂದು ರೋಗ ರಹಿತ ಗಿಡ-ಮರ-ಬಳ್ಳಿಗಳಿಂದ ಸಿಗುವ ಆಹಾರ ವಸ್ತುಗಳನ್ನು ಮನುಷ್ಯ- ಸಾಕು ಪ್ರಾಣಿ, ಪಕ್ಷಿಗಳು ಸೇವಿಸಿದಾಗ ಅವರ ಬೆಳವಣಿಗೆಯಲ್ಲಿ ದೃಢತೆ ಕಾಣಲು ಸಾಧ್ಯವಿದೆ. ರಸಗೊಬ್ಬರಗಳಿಂದ ಬೆಳೆದ ಆಹಾರ ಧಾನ್ಯದಲ್ಲಿ ರುಚಿ ಇಲ್ಲ. ಪೌಷ್ಟಿಕತೆಯಂತೂ ದೂರದ ಮಾತು. ಇತ್ತೀಚೆಗೆ ಬಂದ ಸಾಂಕ್ರಮಿಕ ಕಾಯಿಲೆ ಕೊರೋನಾದಿಂದ ತೀರಿಕೊಂಡವರ ಆಹಾರ ಪದ್ಧತಿಯೇ ಅವರ ಸಾವಿಗೆ ಕಾರಣವೇ ಹೊರತು ವೈರಸ್ ದಾಳಿಯಲ್ಲ. ವೈರಸ್ ದಾಳಿಯಿಂದ ದೇಹವನ್ನು ಕಾಪಾಡುವ ನಿಯಂತ್ರಣ ಶಕ್ತಿಯೇ ಇಂದಿನ ಆಹಾರ ಪದ್ಧತಿ, ಅದನ್ನು ಉತ್ಪಾದಿಸುವ ವಿಧಾನಗಳೇ ಮುಖ್ಯ ಕಾರಣವೆಂದು ಸಾಬೀತು ಪಡಿಸಬಹುದು

ಆಹಾರ ಸೇವನೆಗೂ ಒಂದು ವಿಧಾನವಿದೆ. ಅದು ತಾಳ ತಪ್ಪಿದರೆ ಹೋಯ್ತು. ಒಬ್ಬ ಆಧುನಿಕ ಬ್ರಹ್ಮ ನನ್ನನ್ನೇ ವಿಚಾರಿಸಿದ್ದ. ನೀವು ತಿನ್ನುವ ಎಲ್ಲಾ ವಸ್ತುಗಳು ಹೊಟ್ಟೆಗೇ ಹೋಗುತ್ತವೆ ತಾನೇ! ಹಾಗಿದ್ದರೆ ಎಲ್ಲವನ್ನೂ ಕಲಸಿ ತಿಂದರು ಹೋಗುವುದು ಹೊಟ್ಟೆಗಲ್ಲವೇ! ಅನ್ನ, ಸಾಂಬಾರು, ಪಲ್ಯ, ಪಾಯಸ, ಲಡ್ಡು ಹೋಳಿಗೆ ಎಲ್ಲವನ್ನೂ ಒಟ್ಟಿಗೇ ಕಲಸಿ ತಿಂದರೆ ಏನು? ಎಲ್ಲವೂ ಹೊಟ್ಟೆಗೆ ತಾನೇ ಹೋಗುವುದು! ಆತ ಹೇಳಿದ ಹಾಗೆಯೇ ಬೀದಿ ಬದಿಯಲ್ಲಿದ್ದ ಒಬ್ಬ ಹುಚ್ಚ ತಿನ್ನುತ್ತಿದ್ದುದನ್ನು ನೋಡಿದಾಗ ಆತ ಹೇಳಿದ್ದರಲ್ಲೂ ಸತ್ಯಾಂಶವಿದೆ. ಅನ್ನಿಸಿದರೆ ತಪ್ಪೇನಿಲ್ಲ. “ಹುಚ್ಚ”

ಈಗ ನಾವು ಸಸ್ಯಗಳ ಬಗ್ಗೆ ಯೋಚಿಸಿದರೆ – ನಾವು ಬಾಯಿಯ ಮೂಲಕ ಆಹಾರ ಸೇವಿಸುತ್ತೇವೆ. ಸೇವಿಸಿದ ಆಹಾರ ಜಠರ ಸೇರಿದಾಗ ಜಠರಾಗ್ನಿ ಅದನ್ನು ಜೀರ್ಣಕ್ರಿಯೆಗೆ ಉತ್ತೇಜಿಸುತ್ತದೆ. ಈ ಸಂದರ್ಭದಲ್ಲಿ ಆಹಾರದಲ್ಲಿ ಅಡಕವಾಗಿರುವ ಸತ್ವಗಳು ಸೂಕ್ಷ್ಮಣಗಳಿಂದ ಪ್ರತ್ಯೇಕಗೊಂಡು ರಕ್ತವನ್ನು ಸೇರುತ್ತದೆ. ರಕ್ತದಿಂದ ಶಾರೀರಿಕ ಬೆಳವಣಿಗೆ ಆಗುವುದು ಎಲ್ಲರಿಗೂ ಗೊತ್ತಿದೆ. ರಕ್ತವನ್ನು ಸೇರುವ ಪೋಷಕಾಂಶಗಳು ಹೆಚ್ಚು ಕಡಿಮೆಯಾದಾಗ ನಮ್ಮ ಅರಿವಿಗೆ ಬಾರದಂತೆ ಶಾರೀರಿಕ ಬೆಳವಣಿಗೆ ಬದಲಾಗುತ್ತದೆ. ಆಗ ವೈದ್ಯರು ಸಮತೋಲನದ ಆಹಾರದ ಬಗ್ಗೆ ತಿಳಿಸುತ್ತಾರೆ. ವಯಸ್ಸಿಗೆ ತಕ್ಕ ಆರೋಗ್ಯಕರ ಆಹಾರ ಸೇವಿಸಿದರೆ ವೈಯಕ್ತಿಗೆ ತಕ್ಕ ಬೆಳವಣಿಗೆ ಸಾಧ್ಯ.

ಅದೇ ರೀತಿಯಲ್ಲಿ ಸಸ್ಯಗಳಿಗೂ ಈ ನೀತಿ ಅನ್ವಯಿಸುತ್ತದೆ. ಅವುಗಳೂ ನಮ್ಮಂತೆಯೇ ಆರೋಗ್ಯಕರ ಆಹಾರ ಕೊಟ್ಟು ಬೆಳಸಿದರೆ ಯಾವುದೇ ಕಾಯಿಲೆಗೆ ಜಗ್ಗದೆ ಆರೋಗ್ಯ ವೃದ್ಧಿಗೆ ಬೇಕಾದ ಆಹಾರವನ್ನು ನೀಡುತ್ತವೆ. ನಾವು ಬಾಯಿಯ ಮೂಲಕ ಆಹಾರ ಸೇವಿಸಿದರೆ ಅವು ಬೇರಿನ ಮೂಲಕ ಸ್ವೀಕರಿಸುತ್ತವೆ. ಅವುಗಳಿಗೆ ಆಹಾರ ಸೇವನೆಗೆ ಸಾಧ್ಯವಾಗುವುದು ಆ ಆಹಾರ ನೀರಿನೊಂದಿಗೆ ಸೇರಿ ಅದರಲ್ಲಿರುವ ಪೋಷಕ ದ್ರವ್ಯಗಳು ದ್ರವ ರೂಪಕ್ಕೆ ಸೇರಿಕೊಂಡಾಗ ಸಸ್ಯಗಳು ಸೇವಿಸುವ ಆಹಾರ ನೀರಲ್ಲಿ ಬೆರೆಯಲು ಅದು ಸೂಕ್ಷ್ಮಾಣು ಜೀವಿಗಳಿಂದ ಕಳಿತು ಪ್ರತ್ಯೇಕವಾದಾಗ ಮಾತ್ರ ಸಾಧ್ಯ.

ಅಂದರೆ ಯಾವುದೇ ತ್ಯಾಜ್ಯ ಕಳಿಯಲು ಸೂಕ್ಷ್ಮಾಣು ಜೀವಿಗಳ ಸಹಾಯ ಹಸ್ತಬೇಕು. ಈಗ ಯೋಚಿಸಿ, ರಾಸಾಯನಿಕ ಗೊಬ್ಬರಗಳು ಈ ಜೀವ ಜಾಲವನ್ನು ಕೊಲ್ಲುತ್ತವೆ. ಅವುಗಳಲ್ಲಿ ಅಡಕವಾದ ಪೋಷಕಾಂಶಗಳು ನೀರಿಗೆ ಸೇರಿ ಮಣ್ಣಿಗೆ ಮಿಶ್ರವಾದಾಗ ಮಣ್ಣಿನಲ್ಲಿರುವ ಸಾವಯವ ವಸ್ತುಗಳನ್ನು ವಿಘಡಿಸುವ ಕ್ರಿಯೆಗೆ ಸೂಕ್ಷ್ಮಾಣುಗಳ ಕೊರತೆ ಉಂಟಾಗುತ್ತದೆ. ಆದರೆ ಕಳಿತ ಕಂಪೋಸ್ಟ್ ಗೊಬ್ಬರ ಮಣ್ಣಿಗೆ ಜೀವ ತುಂಬಿ ಸಸ್ಯಗಳಿಗೆ ಬೇಕಾದ ಪ್ರಮಾಣದ ಆಹಾರವನ್ನು ಯಾರ ತಡೆಯೂ ಇಲ್ಲದೆ ಸೂಕ್ಷ್ಮ ಬೇರುಗಳ ಮೂಲಕ ಸೇವಿಸುತ್ತವೆ.

ಯಾರು ಆರೋಗ್ಯಕರ ಸಸ್ಯಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಬಯಸುತ್ತಾರೋ ರುಚಿಕರವಾದ ಆಹಾರವನ್ನು ಬಯಸುತ್ತಾರೋ ಅವರು “ಸಸ್ಯ ಜನ್ಯ ಪ್ರಾಣಿಜನ್ಯ ಕಾಂಪೋಸ್ಟ್ನಿಂದ ಕೃಷಿ ಮಾಡುವುದು ಅನಿವಾರ್ಯ. ಕಳಿತ ಗೊಬ್ಬರವನ್ನು ಆಂಗ್ಲ ಭಾಷೆಯಲ್ಲಿ ಕಾಂಪೋಸ್ಟ್ ಎನ್ನುತ್ತಾರೆ. ಇದು ನೈಸರ್ಗಿಕವಾಗಿ ಕಾಡಿನಲ್ಲಿ ತಯಾರಾಗುತ್ತದೆ. ಆದರೆ ಕಾಡಿನ ಮಣ್ಣನ್ನು ಕೆತ್ತಿ ತೆಗೆದು ನಮ್ಮ ಬಳಕೆಗೆ ಉಪಯೋಗಿಸಬಹುದು ಎಷ್ಟರ ಮಟ್ಟಿಗೆ ಸರಿ! ಬೇರೆಯವರ ಆಹಾರವನ್ನು ನಾವು ತಿಂದಂತೆ. ಕಾಡಿನಲ್ಲಿ ಎಲ್ಲಾ ಜಾತಿಯ ಸಸ್ಯಗಳು ತಾನಾಗಿಯೇ ಬೆಳೆಯುತ್ತವೆ. ಅವುಗಳಿಗೆ ಗೊಬ್ಬರ ನೀರಿನ ಅವಶ್ಯಕತೆ ಇದ್ದರೂ ಅದರ ಪೂರಕ್ಕೆ ನೈಸರ್ಗಿಕವಾಗಿ ನೆರವೇರುತ್ತದೆ.

ಬೇಸಿಗೆಯಲ್ಲಿ ಬಿದ್ದ ಒಣ ಎಲೆ, ಮರದ ಕುಂಬಾದ ಭಾಗ, ಮೇಲ್ಪದರದ ಆಳಕ್ಕೆ ಬೀರೂರದ ಸಸ್ಯಗಳು ಅಲ್ಲೇ ಮಳೆ ನೀರಲ್ಲಿ ಸೇರಿಕೊಂಡು ಒದ್ದೆಯಾದಾಗ ಆ ತ್ಯಾಜ್ಯವನ್ನು ಸೂಕ್ಷ್ಮಾಣುಗಳು ತಿಂದು ಮಣ್ಣಿನ ಮೇಲೆ ವಿಸರ್ಜಿಸುತ್ತವೆ. ಅವುಗಳು ವಿಸರ್ಜಿಸಿದ ತ್ಯಾಜ್ಯಗಳಲ್ಲಿ ಸೂಕ್ಷ್ಮ ಸಸ್ಯಗಳು ಬೆಳೆಯುತ್ತವೆ. ಆ ಸಸ್ಯಗಳ ಆಯುಷ್ಯ ಕಡಿಮೆ ಇದ್ದು ಅವು ಸತ್ತು ಮಣ್ಣಿನಲ್ಲಿ ಬೆರೆಯುತ್ತವೆ. ಆಗ ಮಣ್ಣು ಫಲವತ್ತಾಗುತ್ತದೆ. ಈ ಕ್ರಿಯೆ ನಿರಂತರ ನಡೆಯುವಾಗ ಮಣ್ಣು ಜೀವಂತವಾಗಿರುತ್ತದೆ.

ಬೆಳೆಯುವ ಸಸ್ಯಗಳಿಗೆ ಮಣ್ಣೇ ಆಧಾರ. ಫಲವತ್ತಾದ ಮಣ್ಣು ನೀರಿನ ಕಣಗಳನ್ನು, ಗಾಳಿಯನ್ನು ಹೀರಿಕೊಳ್ಳುವುದರಿಂದ ಬೇಸಿಗೆಯಲ್ಲೂ ಜೀವಂತವಾಗಿಯೇ ಇದು ಎಲೆ ಉದುವುದರಿಂದ ಸಸ್ಯಗಳಿಗೆ ಬೇಗನೆ ಆಹಾರ ಲಭ್ಯವಾಗಿ ಅವುಗಳು ಚಿಗುರು ಬಿಟ್ಟು ಮತ್ತೆ ಬೆಳೆಯಲು ಸುಲಭವಾಗುತ್ತದೆ. ಈ ತತ್ವವನ್ನು ಅಳವಡಿಸಿಕೊಂಡಿರುವ ಕೃಷಿಯೇ ನೈಸರ್ಗಿಕ ಕೃಷಿ. ಕಾಡಿನ ನೈಸರ್ಗಿಕತೆಯನ್ನು ವಿವಿಧ ಬೆಳೆಗಳನ್ನು ಬೆಳೆದು ನಾವು ಕೂಡ ಸುಲಭದಲ್ಲಿ ಬೆಳೆ ತೆಗೆಯಬಹುದು.

ಕಳಿತ ಗೊಬ್ಬರಗಳನ್ನು ತಯಾರಿಸಲು ಹಲವು ವಿಧಾನಗಳಿವೆ. ರಾಶಿ ಪದ್ಧತಿ, ತೊಟ್ಟಿ ಪದ್ಧತಿ ಹಾಗೂ ಎರೆಹುಳು ಸಾಕಾಣಿಕೆಯಿಂದ ಕಳಿತ ಗೊಬ್ಬರಗಳನ್ನು ಪಡೆಯಬಹುದು. ರಾಶಿ ಪದ್ಧತಿ, ತೊಟ್ಟಿ ಪದ್ಧತಿಗೆ ಮಣ್ಣು ಹರಡುವ ಕೆಲಸವಿದ್ದರೆ ಎರೆಹುಳು ಗೊಬ್ಬರವನ್ನು ಮಣ್ಣಿಗೆ ಮಿಶ್ರಮಾಡಿ ಉಪಯೋಗಿಸಬೇಕು. ನೇರ ಎರೆ ಗೊಬ್ಬರ ಬಿಸಿಲಿಗೆ ಆವಿಯಾಗದಂತೆ ಮೇಲ್ಪದರಕ್ಕೆ ಸ್ವಲ್ಪ ಮರಳು ಮಿಶ್ರಿತ ಮಣ್ಣನ್ನು ಸೇರಿಸುವುದು ಅಗತ್ಯ. ನಡೆದಾಡುವ ದಾರಿಯ ಧೂಳನ್ನು ಕೂಡ ಉಪಯೋಗಿಸಬಹುದು. ಈ ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ, ಸಸ್ಯಗಳ ತ್ಯಾಜ್ಯವಿದ್ದು ಅದು ಮಣ್ಣಿನಲ್ಲಿ ಪುನರುತ್ಪತ್ತಿಯಾಗುವುದು

ರಾಶಿ ಪದ್ಧತಿ: ೫ ಅಡಿಯ ವೃತ್ತಾಕಾರದ ೫ ಇಂಚಿನ ಗುಂಡಿ ತೆಗೆದು ತಳಭಾಗಕ್ಕೆ ಸಗಣಿ ನೀರು ಹಾಕಿ ಒಂದು ಗಟ್ಟಿ ಮಾಡಿಕೊಂಡು ರಾಶಿ ಪದ್ಧತಿಯ ಗೊಬ್ಬರ ತಯಾರಿಸಬಹುದು. ಮೊದಲು ಒಣ ತ್ಯಾಜ್ಯಗಳಾದ ತರಗಲೆ, ಒಣಕಳೆ ಕುಂಬು ಮರದ ಕೊಂಬೆಗಳ ತ್ಯಾಜ್ಯ, ಪ್ರಾಣಿಗಳ ಎಲುಬಿನ ಪುಡಿ, ಕೋಳಿ ಹಿಕ್ಕೆ, ಹುಳಿಮಜ್ಜಿಗೆ ಮುಂತಾದ ಲಭ್ಯ ವಸ್ತುಗಳನ್ನು ನಾಲ್ಕು ೫ ಇಂಚು ದಪ್ಪದಲ್ಲಿ ಸುರುವಿ ಕಾಲಲ್ಲಿ ತುಳಿದು ಮೇಲಿಂದ ೧ ಇಂಚು ಕಪ್ಪು ಮಣ್ಣನ್ನು ಹರಡಿದರೆ ಒಂದನೇ ಘಟಕವಾಯಿತು. ಮುಂದೆ ಹಸಿರೆಲೆ, ಹುಲ್ಲು, ಕಳೆ ಮುಂತಾದ ಎಲ್ಲಾ ಜಾತಿಯ ಸಸ್ಯಗಳನ್ನು ಪುನಃ ೫ ಇಂಚು ತುಂಬಿಸಿ ೧ ಇಂಚಿನ ಮಣ್ಣಿನ ಪದರ ಹರಡಿಕೊಂಡು ಅದೇ ವಿಧಾನದಲ್ಲಿ ಮೂರು ಅಡಿ ಎತ್ತರಕ್ಕೆ ತಿರುಮಿಡ್ ಆಕಾರಕ್ಕೆ ತರಬೇಕು.

ಪ್ರತಿ ಬಾರಿಯೂ ಯಾವುದಾದರೂ ಒಂದು ಪ್ರಾಣಿಯ ತ್ಯಾಜ್ಯವನ್ನು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಆ ನೀರನ್ನು ಕನಿಷ್ಠ ೫-೬ ಲೀಟರಿನ ಹಾಗೆ ತೋಯಿಸಿಕೊಳ್ಳುವುದು ಅಗತ್ಯ. ಪೂರ್ತಿ ತುಂಬಿದ ಮೇಲೆ ತಳದಿಂದ ಮೇಲ್ಮಟ್ಟದ ಶಿಖರದ ತನಕ ಹಾಗೆ ತೋಯಿಸಿಕೊಳ್ಳುವುದು ಅಗತ್ಯ. ಒಂದು ಇಂಚು ದಪ್ಪಕ್ಕೆ ಮಣ್ಣು ಹಚ್ಚಬೇಕು. ಮಣ್ಣಿಗೆ ನೀರು ಹನಿಸಿ ಕೈಯಿಂದ ಲೇಪಿಸಬೇಕು. ಈ ಕೆಲಸ ಮುಗಿದ ಮೇಲೆ ಪ್ರತಿ ದಿನ ನೀರು ಸಿಂಪಡಿಸಬೇಕು. ತೇವಾಂಶವಿರುವಂತೆ ನೋಡಿದರೆ ೮೦ ದಿನಗಳಲ್ಲಿ ಕಳಿತ ಗೊಬ್ಬರ ಸಿದ್ಧ. ಇದನ್ನು ತಿರುವಿ ಹಾಕುವಾಗ ಸಿಕ್ಕಿದ ಗಟ್ಟಿ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ಸರದಿಗೆ ಉಪಯೋಗಿಸಬಹುದು. (ಕಳಿತ ಗೊಬ್ಬರವನ್ನು ಬರಿಗೈಯಿಂದ ಮುಟ್ಟಬಾರದು) ಇದೇ ವಿಧಾನದಲ್ಲಿ ತೊಟ್ಟಿ ಪದ್ಧತಿಯಲ್ಲೂ ಗೊಬ್ಬರ ತಯಾರಿಸಬಹುದು. ತೊಟ್ಟೆ ಪದ್ಧತಿಗೆ ಮೂರು ಅಡಿ ಅಗಲ ಹಾಗೂ ಮೂರು ಅಡಿ ಎತ್ತರದ ಅಡಿಕೆ ಮರದ ಸಲಿಕೆ, ಬಿದಿರಿನ ಸಲಿಕೆ ಉಪಯೋಗಿಸಿ ಸ್ಥಳಾವಕಾಶವಿದ್ದಷ್ಟು ಉದ್ದದ ತೊಟ್ಟಿ ಮಾಡಿ ರಾಶಿ ಪದ್ಧತಿಯಂತೆ ತುಂಬಿದರೆ ಸಾಕು

 -ಎಂ.ಟಿ. ಶಾಂತಿಮೂಲೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group