ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ವಲಯ ಕಸ್ತೂರಿರಂಗನ್ ವರದಿಯು ಅನುಷ್ಠಾನಕ್ಕೆ ಕೇಂದ್ರ ಸರಕಾರವು ಈಗಾಗಲೇ 7ನೇ ಬಾರಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿದ್ದ ಜನರಲ್ಲಿ ಮತ್ತೆ ಆತಂಕವನ್ನು ಸೃಷ್ಟಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಸ್ವಲ್ಪ ಗುಜರಾತಿನಲ್ಲಿ ಹರಡಿರುವ ಪಶ್ಚಿಮ ಘಟ್ಟವನ್ನು ಜೀವವೈವಿಧ್ಯತೆ ತುಂಬಿರುವ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯಲ್ಲಿ ಗುರುತಿಸಲಾಗಿತ್ತು. ರಾಜ್ಯದಲ್ಲಿ ಚಾಮರಾಜನಗರ, ಮೈಸೂರು, ಕೊಡಗು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ಬೆಳಗಾವಿ ಮೊದಲಾದ ಜಿಲ್ಲೆಗಳು ಸೇರಿದಂತೆ ಸುಮಾರು 1570 ಕ್ಕೂ ಹೆಚ್ಚು ಗ್ರಾಮಗಳು ಈ ವ್ಯಾಪ್ತಿಯಲ್ಲಿ ಸೇರಿಕೊಂಡಿವೆ. ಈ ಗ್ರಾಮಗಳಲ್ಲಿ ಜನ ವಾಸ್ತವ್ಯವಿದೆ. ಕೃಷಿ, ಬದುಕು, ಸಂಸ್ಕೃತಿ ತಲೆತಲಾಂತರದಿಂದ ಇದೆ. ಆದರೂ ಎಲ್ಲವನ್ನು ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿರುವುದು ಮಾತ್ರ ಅಚ್ಚರಿಯನ್ನು ಮೂಡಿಸುತ್ತದೆ.
ಪಶ್ಚಿಮಘಟ್ಟದ ಬುಡದಲ್ಲಿರುವ ಹಳ್ಳಿಗಳಲ್ಲಿ ಕೃಷಿ, ತೋಟಗಾರಿಕೆ, ಭೂಮಿಯ ಹಕ್ಕು ಬಾಧ್ಯತೆಗಳಿಗೆ ಯಾವುದೇ ತೊಂದರೆಯಾಗದು ಎಂದು ವರದಿಯಲ್ಲಿ ಹೇಳಲಾಗುತ್ತಿದ್ದರೂ ಕೆಲವು ನಿರ್ಬಂಧಗಳು ಅಲ್ಲಿಯ ಮೂಲಭೂತ ಸೌಕರ್ಯಗಳನ್ನು ನಿಧಾನವಾಗಿ ಕಸಿದುಕೊಳ್ಳುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ಯಾರೂ ವಿರೋಧಿಸಲಾರರು. ಆದರೆ ಕೃಷಿ ಭೂಮಿಯನ್ನು ಮತ್ತು ಜನವಸತಿ ಪ್ರದೇಶಗಳನ್ನು ಸೇರಿಸಿರುವುದಕ್ಕೆ ಆಕ್ಷೇಪವಿದೆ. ಕಾದಿಟ್ಟ ಅರಣ್ಯ, ಸಂರಕ್ಷಿತ ಅರಣ್ಯ, ಅಭಯಾರಣ್ಯ, ಕೆಲವು ಯೋಜನೆಗಳಿಗೆ ಮೀಸಲಾದ ಅರಣ್ಯಗಳು ಸೇರಿದಂತೆ ಅರಣ್ಯದ ಹತ್ತಿರಕ್ಕೂ ಹೋಗಗೊಡದ ಹಲವಾರು ಅರಣ್ಯ ಕಾಯ್ದೆಗಳಿವೆ. ಅದೆಲ್ಲಾ ಇದ್ದಾಗಲೂ ಪರಿಸರ ಸೂಕ್ಷ್ಮವಲಯಕ್ಕೆ ಘಾಸಿಯಾಗಿರುವುದು ಹೇಗೆ? ಮತ್ತು ಹೊಣೆಗಾರಿಕೆ ಜಾರಿದ್ದು ಯಾರಿಂದ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಅರಣ್ಯದ ಹೆಸರಿನಲ್ಲಿ ಅರಣ್ಯವಾಸಿಗಳ ಬದುಕನ್ನೇ ಕಸಿದುಕೊಂಡ ಮತ್ತು ಅದರಿಂದ ನೋವು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಹಲವು ಕುಟುಂಬಗಳಿವೆ. ಪಶ್ಚಿಮಘಟ್ಟದ ಬುಡದಲ್ಲಿರುವ ಹಳ್ಳಿಗಳಲ್ಲಿ ಕೃಷಿಯಿಂದಲೇ ಜೀವನ ಸಾಗಿಸುತ್ತಿರುವ, ಕೃಷಿ ಕೆಲಸ ಕಾರ್ಯಗಳನ್ನೇ ನೆಚ್ಚಿಕೊಂಡಿರುವ ಕೃಷಿಕಾರ್ಮಿಕರು ತಮ್ಮ ಬದುಕನ್ನು ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ ಈಗ ಎದುರಾಗಿದೆ. ಪಶ್ಚಿಮಘಟ್ಟದ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದುದು ಅತ್ಯವಶ್ಯ. ಕಾಡಿನ ಪರಿಸರದ ಕೆಲ ಅಮೂಲ್ಯವಾದ ಗಿಡಮರಗಳನ್ನು ತಮ್ಮ ಕೃಷಿ ಭೂಮಿಯಲ್ಲೂ ಕೃಷಿಕ ಪೋಷಿಸುತ್ತಿದ್ದಾನೆ.
ಉಪಗೃಹ ಆಧಾರಿತ ಸಮೀಕ್ಷೆಯನ್ನೇ ಆಧಾರವಾಗಿರಿಸಿಕೊಂಡು ಇಡೀ ಗ್ರಾಮ ಮತ್ತು ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯವೆಂದು ಪರಿಗಣಿಸುವುದು ಸರಿಯಾದ ಮಾನದಂಡವಲ್ಲ. ಕಾಡಂಚಿನ ಹಳ್ಳಿಗಳ ಜನವಸತಿ ಪ್ರದೇಶ ಕೃಷಿ ಭೂಮಿಯನ್ನು ಸರ್ವೆಮಾಡಿ ಹೊರಗಿರಿಸಿ ಜೀವವೈವಿಧ್ಯತೆಯುಳ್ಳ ಅರಣ್ಯ ಪ್ರದೇಶಕ್ಕೆ ಗಡಿ ಗುರುತುಗಳನ್ನು ಮಾಡಲಿ. ಕಾಡುಪ್ರಾಣಿಗಳು ಕೃಷಿಕರ ಪ್ರದೇಶಕ್ಕೆ ಬಾರದಂತೆ ಹಾಗೂ ಕಾಡಂಚಿನ ಜನರು ಕಾಡೊಳಗೆ ನುಗ್ಗದಂತೆ ದೊಡ್ಡ ಕಂದಕವನ್ನು ಬೇಕಾದರೂ ತೋಡಿಕೊಳ್ಳಲಿ ಯಾರೂ ಆಕ್ಷೇಪಿಸಲಾರರು.
ತಲೆತಲಾಂತರಗಳಿಂದ ಕನಿಷ್ಠ ಸೌಲಭ್ಯಗಳ ನಡುವೆ ಇದ್ದುದರಲ್ಲಿಯೇ ತೃಪ್ತಿಯಿಂದ ಬಾಳುತ್ತಾ ಬಂದ ಕೃಷಿಕವರ್ಗವನ್ನ, ಹಳ್ಳಿಗರನ್ನು ಕಟ್ಟುಪಾಡುಗಳನ್ನು ವಿಧಿಸಿ ಉಸಿರುಗಟ್ಟುವಂತೆ ಮಾಡುವ ಬದಲು ಕೃಷಿಭೂಮಿಯನ್ನು ಆ ಪ್ಯಾಪ್ತಿಯಿಂದ ಕೈಬಿಡಬೇಕು. ಅರಣ್ಯದೊಳಗೆ ಜನವಸತಿ ಇರುವ ಪ್ರದೇಶಗಳು, ಕೃಷಿ ಭೂಮಿ, ಅರಣ್ಯ ಒತ್ತುವರಿಗಳು ಇಲ್ಲವೆಂದಲ್ಲ. ಕೃಷಿ ಭೂಮಿಯೂ ಜೀವ ವೈವಿಧ್ಯತೆಯ ಅರಣ್ಯದೊಳಗೆ ಇದ್ದರೆ ಅಲ್ಲಿಯ ನಿವಾಸಿಗಳನ್ನು ಕಾಯಿದೆಗಳಿಂದ ಕಟ್ಟಿಹಾಕುವ ಬದಲು ಕೃಷಿ ಭೂಮಿ ಮತ್ತು ಅವರ ಕೃಷಿ ಉತ್ಪಾದನೆಯ ಆದಾಯಕ್ಕೆ ಅನುಗುಣವಾಗಿ ಯೋಗ್ಯ ಪರಿಹಾರವನ್ನು ನೀಡಿ ಗೌರವಯುತ ಬದುಕಿಗೆ ಅವಕಾಶವನ್ನು ಸರಕಾರ ಕಲ್ಪಿಸಲಿ.
ಬರಹ : ರಾಧಾಕೃಷ್ಣ ತೊಡಿಕಾನ









