ಉಡುಪಿ: ಪ್ರಸಕ್ತ ಸಾಲಿನಲ್ಲಿ ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಲ್ಲಿ ಅಡಿಕೆ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ಮೈಲುತುತ್ತು ಹಾಗೂ ಎಲೆಚುಕ್ಕೆ ರೋಗಕ್ಕೆ ಶಿಫಾರಸು ಮಾಡಿರುವ ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗೆ ರೈತರಿಗೆ ಸಹಾಯಧನ ಘೋಷಿಸಲಾಗಿದೆ.
ಪ್ರತಿ ಹೆಕ್ಟೇರ್ಗೆ ₹3,000 ಸಹಾಯಧನ ನೀಡಲಾಗುತ್ತಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹1,500 ಹಾಗೂ ರಾಜ್ಯ ಸರ್ಕಾರದ ಪಾಲು ₹1,500 ಇರಲಿದೆ. ಗರಿಷ್ಠ ಎರಡು ಹೆಕ್ಟೇರ್ವರೆಗೆ ಸಹಾಯಧನ ಪಡೆಯಲು ಅವಕಾಶವಿದ್ದು, ಒಬ್ಬ ರೈತರಿಗೆ ಗರಿಷ್ಠ ₹6,000 ಸಹಾಯಧನ ದೊರೆಯಲಿದೆ.
ಸಹಾಯಧನ ಪಡೆಯಲು ಆಸಕ್ತ ರೈತರು ತಾವು ಖರೀದಿಸಿರುವ ಸಸ್ಯ ಸಂರಕ್ಷಣಾ ಔಷಧಿಯ ಅಧಿಕೃತ ಬಿಲ್, ಆರ್ಟಿಸಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ನ ನಕಲು ಪ್ರತಿಗಳೊಂದಿಗೆ ಉಡುಪಿ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಜೇಷ್ಠತೆ ಆಧಾರದಲ್ಲಿ ಸಹಾಯಧನ
ಇಲಾಖೆಯ ಮಾರ್ಗಸೂಚಿಯಂತೆ ಸ್ವೀಕರಿಸಲಾಗುವ ಅರ್ಜಿಗಳನ್ನು ಜೇಷ್ಠತೆಯ ಆಧಾರದ ಮೇಲೆ ಹಾಗೂ ಇಲಾಖೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಪರಿಶೀಲಿಸಿ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತೋಟಗಾರಿಕೆ ಇಲಾಖೆ, ದೊಡ್ಡಣಗುಡ್ಡೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.










