spot_img
Saturday, July 18, 2026
spot_imgspot_img

ಪ್ರಕೃತಿಯೇ ನೀಡಿದ ಸುಂದರ ಹಗ್ಗ ‘ಸುದೆ ಬೂರು’

ಆಧುನಿಕತೆಯ ಈ ಕಾಲದಲ್ಲಿ ನಮಗೆ ಯಾವುದೆ ವಸ್ತು ಬೇಕಿದ್ದರೂ ಅಂಗಡಿಗೆ ಹೋದರೆ ಸಾಕು. ಬೇಕಾದುದೆಲ್ಲಾ ಅಲ್ಲೇ ಸಿಗುತ್ತದೆ. ಆದರೆ ಹಲವು ವರ್ಷಗಳ ಹಿಂದೆ ಗ್ರಾಮೀಣ ಭಾಗದ ಜೀವನ ಶೈಲಿ ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಭಿತವಾಗಿತ್ತು. ಕೃಷಿ ಭೂಮಿಗೆ ಬೇಲಿ ಹಾಕಲು ನೈಸರ್ಗಿಕ ಹಗ್ಗಗಳೇ ಸಂಪನ್ಮೂಲವಾಗಿದ್ದವು.

ರೈತರು ತಮ್ಮ ಭೂಮಿಯಲ್ಲಿ ಕಷ್ಟಪಟ್ಟು ಬೆಳೆದ ಕೃಷಿಗೆ ದನಕರುಗಳು ಹಾಗೂ ಕಾಡು ಪ್ರಾಣಿಗಳು ನುಗ್ಗಿ ಬೆಳೆ ಹಾನಿ ಮಾಡದಂತೆ ರಕ್ಷಣಾ ಬೇಲಿಗಳನ್ನು ನಿರ್ಮಿಸುತ್ತಿದ್ದರು. ಈ ಬೇಲಿಗಳನ್ನು ಗಟ್ಟಿಯಾಗಿ ಬಿಗಿದು ಕಟ್ಟಲು ಹಗ್ಗಗಳ ಅಗತ್ಯವಿತ್ತು. ಆದರೆ, ಆ ಕಾಲದಲ್ಲಿ ಹಗ್ಗ ಖರೀದಿಸಲು ಯಾರೂ ಪೇಟೆಗೆ ಹೋಗುತ್ತಿರಲಿಲ್ಲ. ಅದಕ್ಕಾಗಿ ಅಂಗಡಿಗಳನ್ನು ಹುಡುಕಾಡುತ್ತಿರಲಿಲ್ಲ. ಬದಲಾಗಿ, ತಮ್ಮ ಸಮೀಪದ ಕಾಡು ಅಥವಾ ಪರಿಸರಕ್ಕೆ ಹೋಗಿ ನೈಸರ್ಗಿಕವಾಗಿ ಸಿಗುವ ‘ಬೀಳು ಬಳ್ಳಿ’ಗಳನ್ನು ತರುತ್ತಿದ್ದರು.

ಈ ಬಳ್ಳಿಗಳಲ್ಲಿ ಕೆಲವು ನೇರವಾಗಿ ಬಳಸಲು ಯೋಗ್ಯವಾಗಿದ್ದರೆ, ಇನ್ನು ಕೆಲವು ದಪ್ಪನೆಯ ಬಳ್ಳಿಗಳನ್ನು ಸೀಳಿ, ಎಳೆ ಎಳೆಯಾಗಿ ಮಾರ್ಪಡಿಸಿ ಅತ್ಯಂತ ಬಲಿಷ್ಠವಾದ ಹಗ್ಗಗಳನ್ನು ಸಿದ್ಧಪಡಿಸುತ್ತಿದ್ದರು.

ಕಾಡಿನಲ್ಲಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಹೊಳೆ-ನದಿಗಳ ದಂಡೆಯ ಮೇಲೂ ಇಂತಹ ಬಳ್ಳಿಗಳು ಬೆಳೆಯುತ್ತಿದ್ದವು. ಕರಾವಳಿ ಭಾಗದ ಹೊಳೆದಂಡೆಯ ಮೇಲೆ ಬೆಳೆಯುವ “ಸುದೆ ಬೂರು” (ಹೊಳೆ ಬಳ್ಳಿ) ಅತ್ಯಂತ ಗಟ್ಟಿಯ ಬಳ್ಳಿ.. ತುಳು ಭಾಷೆಯಲ್ಲಿ ಸುದೆ ಅಥವಾ ತುದೆ ಬೂರು ಎಂದು ಕರೆಯುತ್ತಾರೆ.

ನದಿ ದಂಡೆಯ ಮರಳು ಹಾಗೂ ಸಣ್ಣ ಸಣ್ಣ ಚಪ್ಪಡಿ ಕಲ್ಲುಗಳ ನಡುವೆ ತಲೆಯೆತ್ತಿ ನಿಲ್ಲುವ ಈ ಹೊಳೆ ಬಳ್ಳಿಯ ಜೀವಶಕ್ತಿ ನಿಜಕ್ಕೂ ಅದ್ಭುತ. ಇದು ಎಂತಹ ಕಠಿಣ ವಾತಾವರಣವನ್ನಾದರೂ ಸಹಿಸಿಕೊಳ್ಳಬಲ್ಲದು:

ಮಳೆ ಸುರಿದರೂ ಈ ಬಳ್ಳಿ ಕೊಳೆಯುವುದಿಲ್ಲ, ಹೊಳೆ ತುಂಬಿ ಹರಿದರೂ, ಮುಳುಗಿದರೂ ಅದರ ಅಸ್ತಿತ್ವ ಕಳಚುವುದಿಲ್ಲ. ಬೇಸಿಗೆಯ ಸುಡು ಬಿಸಿಲಲ್ಲೂ ಒಣಗಿ ಹೋಗದೆ ತನ್ನ ಗಟ್ಟಿತನವನ್ನು ಕಾಯ್ದುಕೊಳ್ಳುತ್ತದೆ. ಉದ್ದವಾಗಿ ಹಾಗೂ ಗಟ್ಟಿಯಾಗಿ ಬೆಳೆಯುವ ಈ ಬಳ್ಳಿಗಳನ್ನು ಹಿಂದಿನ ಕಾಲದಲ್ಲಿ ಕೇವಲ ಬೇಲಿ ಕಟ್ಟಲು ಮಾತ್ರವಲ್ಲದೆ, ಮನೆ ನಿರ್ಮಾಣದ ಕೆಲಸಗಳಿಗೂ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದರು.

ಆಧುನಿಕತೆ ಹೆಚ್ಚಿದಂತೆ ಮನುಷ್ಯನ ಜೀವನಶೈಲಿಯೂ ಬದಲಾಗಿದೆ. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಇಂತಹ ಸಾಂಪ್ರದಾಯಿಕ ಮತ್ತು ಪರಿಸರಸ್ನೇಹಿ ಪದ್ಧತಿಗಳು ಇಂದು ಮೂಲೆಗುಂಪಾಗಿವೆ. ಪ್ರಕೃತಿಯಿಂದ ಸಿಗುತ್ತಿದ್ದ, ಪರಿಸರಕ್ಕೆ ಪೂರಕವಾಗಿದ್ದ ಈ ನೈಸರ್ಗಿಕ ಬಳ್ಳಿಗಳ ಬಳಕೆ ಪೂರ್ಣವಾಗಿ ಕಡಿಮೆಯಾಗಿದೆ. ಅವುಗಳ ಜಾಗವನ್ನು ಕೃತಕವಾದ, ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಹಗ್ಗಗಳು ಆಕ್ರಮಿಸಿಕೊಂಡಿವೆ. ಪ್ಲಾಸ್ಟಿಕ್ ಬಳಕೆಯಿಂದ ಕೆಲಸ ಸುಲಭವಾಗಿದ್ದರೂ, ಅದು ನಮ್ಮ ಪರಿಸರದ ಮೇಲೆ ಹಾನಿ ಮಾಡದಿರದು. ನಮ್ಮ ಹಿರಿಯರು ಪ್ರಕೃತಿ ಪರಿಸರದ ಕಾಳಜಿಯ ಜೊತೆಗೆ ಅದರಿಂದಲೇ ತಮಗೆ ಬೇಕಾದುದನ್ನು ಪಡೆದು ಬದುಕುತ್ತಿದ್ದ ಆ ದಿನಗಳು ಹಾಗೂ ‘ಸುದೆ ಬೂರು’ನಂತಹ ನೈಸರ್ಗಿಕ ಸಂಪನ್ಮೂಲಗಳು ಈಗ ನೆನಪಿನ ಪುಟಗಳಾಗಿ ಉಳಿದಿದೆ

-ಬರಹ : ರಾಧಾಕೃಷ್ಣ ತೊಡಿಕಾನ

ಚಿತ್ರ : ಚಂದ್ರನಾಥ ಬಜಗೋಳಿ

 

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group