ಬೆಂಗಳೂರು: ತೋಟಗಾರಿಕಾ ಪ್ರೇಮಿಗಳು ಮತ್ತು ಸಾರ್ವಜನಿಕರಿಗಾಗಿ ಬೆಂಗಳೂರಿನಲ್ಲಿ ಸಸ್ಯ ಸಂತೆಯನ್ನು ಆಯೋಜಿಸಲಾಗಿದೆ. ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಪ್ರಾದೇಶಿಕ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಬೆಂಗಳೂರಿನ ತೋಟಗಾರಿಕಾ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಈ ‘ಸಸ್ಯ ಸಂತೆ-2026’ ನಡೆಯಲಿದೆ.
ಈ ವಿಶೇಷ ಸಸ್ಯ ಸಂತೆಯು ಜುಲೈ 10, 11 ಮತ್ತು 12ರಂದು ಮೂರು ದಿನಗಳ ಕಾಲ ಬೆಂಗಳೂರಿನ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಜಿಕೆವಿಕೆ ಬಳಿಯ ತೋಟಗಾರಿಕಾ ಮಹಾವಿದ್ಯಾಲಯದ (ತೋ.ವಿ.ವಿ.) ಆವರಣದಲ್ಲಿ ನಡೆಯಲಿದೆ
ಈ ಸಂತೆಯಲ್ಲಿ ವೈವಿಧ್ಯಮಯ ತೋಟಗಾರಿಕಾ ಮಳಿಗೆಗಳು ಇರಲಿದ್ದು, ಹಣ್ಣು, ತರಕಾರಿ, ಪುಷ್ಪ, ನೆಡುತೋಪು, ಔಷಧೀಯ, ಸುಗಂಧ ಹಾಗೂ ಅಲಂಕಾರಿಕ ಸೇರಿದಂತೆ ವಿವಿಧ ಕೃಷಿ ಮತ್ತು ತೋಟಗಾರಿಕಾ ಸಸಿಗಳು ಹಾಗೂ ಬೀಜಗಳ ಪ್ರದರ್ಶನ ಮತ್ತು ಮಾರಾಟವಿರಲಿದೆ. ಇದರೊಂದಿಗೆ ಕೃಷಿ ಬೆಳೆಗಳ ಮಾಹಿತಿ ಪುಸ್ತಕಗಳು, ಆಧುನಿಕ ಪರಿಕರಗಳು, ಗೊಬ್ಬರಗಳು, ಸಸ್ಯ ಸಂರಕ್ಷಕಗಳು, ಪ್ರಚೋದಕಗಳು ಹಾಗೂ ಸಾವಯವ ಮತ್ತು ಸಂಸ್ಕರಿಸಿದ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರಲಿವೆ. ವಿದ್ಯಾರ್ಥಿಗಳು ಹಾಗೂ ಆಸಕ್ತರಿಗಾಗಿ ವಿಶೇಷವಾಗಿ ಬೆಳೆ ಕ್ಷೇತ್ರ ವೀಕ್ಷಣೆಯ ಅವಕಾಶವನ್ನು ಸಹ ಕಲ್ಪಿಸಲಾಗಿದೆ.





