spot_img
Friday, October 18, 2024
spot_imgspot_img
spot_img
spot_img

ಸಿಕ್ಕ ಅವಕಾಶದಲ್ಲಿ ಸಂತೃಪ್ತ ಬದುಕು ಕಂಡ ಎಳನೀರು ವ್ಯಾಪಾರಿ

ಅವರು ಎಳನೀರ ಗೊನೆಗಳನ್ನು ಕಟ್ಟಿದ್ದ ಸೈಕಲ್ಲನ್ನು ತಳ್ಳಿಕೊಂಡು ಹೋಗುತ್ತಿದ್ದರು. ತನ್ನ ಅಂಗಡಿಗೆ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ಪಕ್ಕನೆ ಅನಿಸಬಹುದು. ಆದರೆ ಅವರಿಗೆ ಅಂಗಡಿಯಿಲ್ಲ. ಸೈಕಲಲ್ಲೇ ಸಂಚಾರಿ ಎಳೆನೀರು ಮಾರಾಟ

ಮನಸ್ಸಿದ್ದರೆ ಮಾರ್ಗವಿದೆ. ಆಸಕ್ತಿಯಿದ್ದರೆ ಉದ್ಯೋಗವಿದೆ. ಕೀಳರಿಮೆ ಬಿಟ್ಟರೆ ಮಾಡುವ ಕೆಲಸದಲ್ಲಿ ಉನ್ನತಿಯ ಪಥವಿದೆ. ಸಂತೃಪ್ತ ಜೀವನಕ್ಕೆ ದೊಡ್ಡ ದೊಡ್ಡ ಕನಸುಗಳೇ ಬೇಕಿಲ್ಲ. ಇದ್ದುದರಲ್ಲಿಯೇ ಸಂತುಷ್ಟಿ ಪಡೆಯಬಹುದು.ಎಂಬುದಕ್ಕೆ ಶಿವಮೂರ್ತಿ ಸಾಕ್ಷಿ

ಶಿವಮೊಗ್ಗ ಸಮೀಪದ ಗಾಜನೂರಿನ ಮುಳ್ಕೆರೆ ಶಿವ ಮೂರ್ತಿ ಕೃಷಿಕರು. ಸುಮಾರು ಮೂರು ಎಕರೆ ಜಾಗವಿದೆ. ಒಂದಿಷ್ಟು ತೋಟ. ಸ್ವಲ್ಪ ಬತ್ತದ ಗದ್ದ್ಲೆ. ಆದರಿಂದಲೇ ಜೀವನ ನಿರ್ವಹಣೆ ಕಷ್ಟವೆಂಬ ಅರಿವು ಅವರಲ್ಲಿತ್ತು. ಆದರೆ ಹತಾಶರಾಗಲಿಲ್ಲ. ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ತುಡಿತವಿತ್ತು. ಆಗ ಬದುಕುವ ದಾರಿ ಕಂಡುಕೊಂಡದ್ದು ಎಳನೀರು ಮಾರಾಟದಿಂದ. ಪ್ರತಿದಿನ ಮುಂಜಾನೆ ರೈತರ ತೋಟಗಳಿಗೆ ಹೋಗಿ ತಾನೇ ತೆಂಗಿನ ಮರವೇರಿ ಎಳನೀರು ಗೊನೆಗಳನ್ನು ಕೊಯ್ದು ಮರದಿಂದ ಜಾಗರೂಕತೆಯಿಂದ ಇಳಿಸುತ್ತಾರೆ. ರೈತರಿಗೆ ಕೊಡಬೇಕಾದುದನ್ನು ಪಾವತಿಸಿ ಆನಂತರ ಸೈಕಲ್ಲಿಗೆ ಕಟ್ಟಿಕೊಂಡು ಸುಮಾರು ನಾಲ್ಕು ಕಿಲೋಮೀಟರ್ ದೂರದ ಶಿವಮೊಗ್ಗ ಪೇಟೆಯವರೆಗೆ ಹೋಗುತ್ತಾರೆ. ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರೇ ಗ್ರಾಹಕರು. ದಿನವೊಂದಕ್ಕೆ ೭೦ರಿಂದ ೧೦೦ರವರೆಗೆ ಮಾರಾಟ ಮಾಡುತ್ತೇನೆ. ಗ್ರಾಹಕರಿಗೂ ಗುಣಮಟ್ಟದ ಎಳೆನೀರು ದೊರೆತಂತಾಗುತ್ತದೆ.. ಮಧ್ಯವರ್ತಿಗಳಿಲ್ಲವಾದುದರಿಂದ ರೈತರಿಗೂ ನನಗೂ ಉತ್ತಮ ಬೆಲೆ ಸಿಗುತ್ತದೆ. ಎನ್ನುತ್ತಾರೆ ಶಿವಮೂರ್ತಿ. ಸುಮಾರು ೨೫ ವರ್ಷದಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ನಯವಿನಯದ ಶಿವಮೂರ್ತಿ ಅವರಿಗೆ ಪರಿಚಿತ ಗ್ರಾಹಕರೂ ಇದ್ದಾರೆ. ಆದರೆ ಹೆಚ್ಚಿನವರು ಪಯಣಿಗರು.

ಶಿವಮೂರ್ತಿ ಶಾಲೆ ಮೆಟ್ಟಲು ಹತ್ತಿದ್ದಾರೆ. ಆದರೆ ಓದು ಬರಹ ಒಂದನೆಯ ತರಗತಿಗೆ ನಿಂತು ಹೋಗಿತ್ತು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಮಗಳು ಅಧ್ಯಾಪಕಿಯಾಗಿದ್ದಾರೆ ಮಗ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಬೇಸಿಗೆಯಲ್ಲಿ ಎಳೆನೀರಿಗೆ ಬಹು ಬೇಡಿಕೆಯಿದೆ. ಆದಾಯವೂ ಉತ್ತಮವಿದೆ. ಮಳೆಗಾಲದಲ್ಲಿ ಬೇಡಿಕೆಯೂ ಹೆಚ್ಚಿಲ್ಲ.  ಕೃಷಿಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ

ತನಗಿದ್ದ ಅವಕಾಶದಲ್ಲಿಯೇ ಸ್ವಾಭಿಮಾನ, ಸ್ವಾವಲಂಬನೆಯ ಬದುಕು ಕಂಡುಕೊಂಡ ಶಿವಮೂರ್ತಿಯಂತಹವರು ಇತರರಿಗೂ ಪ್ರೇರಣೆಯಾಗಬಲ್ಲರು.

-ರಾಮ್ ಅಜೆಕಾರ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group