spot_img
Sunday, September 8, 2024
spot_imgspot_img
spot_img
spot_img

ಪಂಚಗವ್ಯ, ಜೀವಾಮೃತ ನೀವೇ ತಯಾರಿಸಿ: ಸಮೃದ್ಧ ಬೆಳೆ ಪಡೀರಿ:ತಯಾರಿ ಹೇಗೆ?

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ಶೇ 7೦ ರಷ್ಟು ಜನರು ಕೃಷಿಯನ್ನೇ ಅವಲಂಭಿಸಿರುತ್ತಾರೆ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ಕೈಗಾರೀಕರಣ ಹಾಗೂ ನಗರೀಕರಣವು ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರವನ್ನು ಉಣಬಡಿಸಲು ಕೃಷಿ ಕಾರ್ಮಿಕರ ಸಮಸ್ಯೆ ತಲೆದೋರಿರುವುದರಿಂದ ಇಂದು ರೈತ ಅತಿ ಹೆಚ್ಚು ಬೆಳೆಯನ್ನು ಉತ್ಪಾದಿಸುವ ಹಾಗೂ ಹಣಗಳಿಸುವ ಸಲುವಾಗಿ ರಾಸಾಯನಿಕ ಪೋಷಕಾಂಶಗಳು ಹಾಗೂ ಕ್ರಿಮಿ ಕೀಟನಾಶಕಗಳ ಮೊರೆ ಹೋಗುತ್ತಿರುವುದರಿಂದ ಮಣ್ಣಿನ ಫಲವತ್ತು, ಭೌತ್ತಿಕ, ರಾಸಾಯನಿಕ ಹಾಗೂ ಜೈವಿಕ ಫಲವತ್ತತೆಯು ಹಾಳಾಗುತ್ತಿದೆ.
ಇದನ್ನು ಮನಗಂಡ ನಾವು ಮುಂದಿನ ಯುವ ಪೀಳಿಗೆಗೆ ಬೇಕಾದ ಪರಿಶುದ್ಧ ಸಂಪನ್ಮೂಲಗಳು ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಮತ್ತು ಪ್ರಮುಖವಾಗಿ ಮಣ್ಣಿನ ಆರೋಗ್ಯದ ಹಿತದೃಷ್ಠಿಯಿಂದ ಕೃಷಿಯಲ್ಲಿ ರಾಸಾಯನಿಕ ಸಸ್ಯರಕ್ಷಕ ಹಾಗೂ ಪ್ರಚೋದಕಗಳ ಪರ್ಯಾಯವಾಗಿ ದೊರೆಯುವ ಪಂಚಗವ್ಯ ಜೀವಾಮೃತ ಮತ್ತು ಬೀಜಾಮೃತವನ್ನು ಬಳಕೆಯನ್ನು ಮಾಡುವುದು ಒಳಿತೆನ್ನಬಹುದು.
ಸಾವಯವ ಸಸ್ಯರಕ್ಷಕ ಹಾಗೂ ಪ್ರಚೋದಕವಾದ ಪಂಚಗವ್ಯದ ತಯಾರಿಕಾ ವಿಧಾನ ಹಾಗೂ ಉಪಯೋಗಗಳನ್ನು ತಿಳಿದುಕೊಳ್ಳಲೇಬೇಕಿದೆ
  
ಪಂಚಗವ್ಯವನ್ನು ತಯಾರಿ ಮಾಡಲು ಬೇಕಾಗುವ ವಸ್ತುಗಳು
 ನಾಟಿ ಹಸುವಿನ ಸಗಣಿ/ತಪ್ಪೆ– 1೦ ಕೆ.ಜಿ.
 ನಾಟಿ ಹಸುವಿನ ಮೂತ್ರ/ಗಂಜಲ – 1೦ ಲೀ.
 ನಾಟಿ ಹಸುವಿನ ಹಾಲು – 6 ಲೀ.
 ನಾಟಿ ಹಸುವಿನ ತುಪ್ಪ– ೦.5 ಕೆ.ಜಿ.
 ನಾಟಿ ಹಸುವಿನ ಮೊಸರು– 6 ಲೀ.
 ಕಬ್ಬಿನ ಹಾಲು 3 ಲೀ.
 ಬಾಳೆ ಹಣ್ಣು 12 (ನಂ)
 ಸೇಂದಿ – 2 ಲೀ ಅಥವಾ 1೦೦ ಗ್ರಾಂ ಯೀಸ್ಟ್ ಅಥವಾ 1೦೦ ಗ್ರಾಂ ಬೆಲ್ಲ
ತಯಾರಿಸುವ ಹಂತ
 25 ಲೀ ಸಾಮರ್ಥ್ಯವುಳ್ಳ ಪ್ಲಾಸ್ಟಿಕ್ ಬಕೇಟ್‌ನಲ್ಲಿ 10 ಕೆ.ಜಿ. ಸಗಣಿ ಮತ್ತು ಗಂಜಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ದಿನ ಕೊಳೆಯಲು ಬಿಡಬೇಕು.
 ಮೊದಲನೇ ದಿನವೇ ಹಸುವಿನ ಮೊಸರನ್ನು ಸಗಣಿ ಮತ್ತುಗಂಜಲದ ಮಿಶ್ರಣದಲ್ಲಿ ಹಾಕಿ 1೦ ದಿನಗಳ ಕಾಲ ಚೆನ್ನಾಗಿ ಕೊಳೆಯಲು ಬಿಡಬೇಕು.
 1೦ ದಿನಗಳ ನಂತರ ಕಾಯಿಸಿ/ಬಿಸಿಮಾಡಿ ತಣ್ಣಗೆ ಮಾಡಿದ ತುಪ್ಪ ಮತ್ತು ಹಾಲನ್ನು ಮಿಶ್ರಣ ಮಾಡಬೇಕು. ಜೊತೆಗೆ ಕಬ್ಬಿನ ಹಾಲು 3 ಲೀ, 12 ಬಾಳೆಹಣ್ಣು ಮತ್ತು 2 ಲೀ ಸೇಂದಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. (ಸೇಂದಿಯ ಬದಲಿಗೆ 1೦೦ ಗ್ರಾಂ. ಬೆಲ್ಲ ಅಥವಾ ಯೀಸ್ಟ್ ಕೂಡ ಬಳಸಬಹುದು)
 ಎಲ್ಲಾ ವಸ್ತುಗಳನ್ನು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಮಿಶ್ರಣ ಮಾಡಿದ ನಂತರ 1೦ ದಿನಗಳ ವರೆಗೆ ಪ್ರತಿದಿನ ಎರಡು ಬಾರಿ ಕಲಕುತ್ತಾ ಬಕೆಟ್ ಬಾಯಿಯನ್ನು ಮುಚ್ಚಬೇಕು. ತಯಾರಿ ಮಾಡಿದ 22 ದಿನಗಳೊಳಗೆ ಪಂಚಗವ್ಯ ಸಿದ್ಧವಾಗುತ್ತದೆ.
ಪಂಚಗವ್ಯದ ಉಪಯೋಗಗಳು:
 ಪೋಷಕಾಂಶಗಳೂ, ಖನಿಜಾಂಶಗಳು ಮತ್ತು ನೀರನ್ನು ಹೀರುವ ಮತ್ತು ಅದನ್ನು ಕಾದಿಡುವ ಸಾಮರ್ಥ್ಯವೂ ಹೆಚ್ಚುತ್ತದೆ.
 ಬೇರುಗಳಲ್ಲಿ ಹೆಚ್ಚಳ, ಉದ್ದ ಹಾಗೂ ಆರೋಗ್ಯ ವರ್ಧನೆ.
 ಸಸ್ಯಗಳ ಅಡುಗೆ ಮನೆಯಾದ ಎಲೆಗಳ ಅಗಲ ಮತ್ತು ಆರೋಗ್ಯವರ್ಧನೆ.
 ಎಲೆ ಮತ್ತು ಕಾಂಡಗಳ ಹೊಳಪು ಹೆಚ್ಚುತ್ತದೆ. ತೆಳುವಾದ ಎಣ್ಣೆಯ ಪದರವೊಂದು ಮೂಡುವುದರಿಂದ ನೀರು ಆವಿಯಾಗುವುದು ತಪ್ಪುತ್ತದೆ.
 ಟೊಂಗೆಗಳ ಸಾಮರ್ಥ್ಯ ಹೆಚ್ಚುವುದರಿಂದ ಕಾಯಿಯ ಭಾರವನ್ನು ಹೊರಲು ಹೆಚ್ಚಿನ ತಾಕತ್ತು ಬರುತ್ತದೆ.
 ಹಾನಿಕಾರಕ ಕೀಟ ಹಾಗೂ ರೋಗಗಳ ನಿಯಂತ್ರಣ.
 ಇಳುವರಿ ಹೆಚ್ಚುವುದರೊಂದಿಗೆ ಬೇಗ ಕೊಯ್ಲಿಗೆ ಬರುತ್ತದೆ.
 ಪಂಚಗವ್ಯವನ್ನು ಎಲ್ಲಾ ರೀತಿಯ ಹೊಲದ ಬೆಳೆಗಳು, ತೋಟಗಾರಿಕಾ ಬೆಳೆಗಳು ಮತ್ತು ತರಕಾರಿಗಳಿಗೂ ಬಳಸಬಹುದು.
ಪಂಚಗವ್ಯದ ಬಳಕೆ ಹೇಗೆ?
ಮಿಶ್ರಣದಿಂದ 7೦ – 1೦೦ ಮಿ.ಲೀ. ಎತ್ತಿಕೊಳ್ಳಿ. ಅದನ್ನು ಚೆನ್ನಾಗಿ ಸೋಸಿರಿ, ಅದನ್ನು 1೦ ಲೀ. ನೀರಿಗೆ ಬೆರೆಸಿ ಬೆಳೆಗೆ ಸಿಂಪರಣೆ ಮಾಡಿ.
ಉದಾ: ಬೆಳೆ ಸಿಂಪರಣಾ ಸಮಯ
ಭತ್ತ1೦, 15, 3೦ ಮತ್ತು 5೦ ದಿನಗಳು ಬಿತ್ತನೆ ಮಾಡಿ, ಉದ್ದಿನಕಾಳು 15, 25 ಮತ್ತು 4೦ ದಿನಗಳು ಬಿತ್ತನೆ ಮಾಡಿದ ನಂತರ, ಹೆಸರುಕಾಳು 15, 25, 45 ಮತ್ತು 5೦ ದಿನಗಳು ಬಿತ್ತನೆ ಮಾಡಿದ ನಂತರ. ಪಂಚಗವ್ಯವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡುವುದರ ಜೊತೆಗೆ ಬೀಜೋಪಚಾರ ಮಾಡಲು ಸಹ ಬಳೆಸಬಹುದು.
ಜೀವಾಮೃತ ತಯಾರಿಸಲು ಬೇಕಾದ ಸಾಮಗ್ರಿಗಳು
ನಾಟಿ ಹಸುವಿನ ಸಗಣಿ 10 ಕೆ.ಜಿ., ನಾಟಿ ಹಸುವಿನ ಗಂಜಲ 10 ಲೀ. ಬೆಲ್ಲ 2 ಕೆ.ಜಿ,  ದ್ವಿದಳ ಧಾನ್ಯದ ಹಿಟ್ಟು 2 ಕೆ.ಜಿ.., ಬದುವಿನ ಮಣ್ಣು 1 ಕೆ.ಜಿ.
ಇವೆಲ್ಲವೂಗಳನ್ನು 200 ಲೀ. ನೀರು ಹಿಡಿಯುವ ಸಾಮರ್ಥ್ಯ ಹೊಂದಿರುವ ಪ್ಲಾಸ್ಟಿಕ್ ಡ್ರಂನಲ್ಲಿ ಹಾಕಿ ನೀರನ್ನು ತುಂಬಿ ಚೆನ್ನಾಗಿ ತಿರುವಬೇಕು. ನಂತರ ಡ್ರಂ ಮೇಲೆ ಒದ್ದೆತಾದ ಗೋಣಿಚೀಲವನ್ನು ಮುಚ್ಚಿ ನೆರಳಿನಲ್ಲಿರಿಸಿ ಪ್ರತಿ ದಿನ ಎರಡು ಬಾರಿ ಮರದ ಕೋಲಿನಿಂದ ತಿರುವುತ್ತಿರಬೇಕು. ಮಿಶ್ರಣವು 7 ದಿನಗಳೊಳಗಾಗಿ ಜಮೀನಿನಲ್ಲಿ ಉಪಯೋಗಿಸಲು ಸಿದ್ಧವಾಗುತ್ತದೆ.
ಉಪಯೋಗಗಳೇನು?
• 50-100 ಮೀ. ಲೀ. ಜೀವಾಮೃತವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದರಿಂದ ಬೆಳೆಯ ಬೆಳವಣಿಗೆ ಮತ್ತು ಇಳುವರಿಯನ್ನು ವೃದ್ಧಿಸಬಹುದು
• ನೀರಾವರಿಯ ಮುಖಾಂತರ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಬಹುದು.
ಬೀಜಾಮೃತ ತಯಾರಿಸಲು ಬೇಕಾದ ಸಾಮಗ್ರಿಗಳು, ಪರಿಕರಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
 ನಾಟಿ ಹಸುವಿನ ಸಗಣಿ 5 ಕೆ.ಜಿ., ನಾಟಿ ಹಸುವಿನ ಗಂಜಲ 5 ಲೀ., ಸುಣ್ಣ 50 ಗ್ರಾಂ, ನಾಟಿ ಹಸುವಿನ ಹಾಲು 1 ಲೀ, ನೀರು 1೦೦ ಲೀ.
ತಯಾರಿಸೋದು ಹೇಗೆ?
 20 ಲೀ. ನೀರಿರುವ ಡ್ರಂನಲ್ಲಿ 5 ಕೆ.ಜಿ. ಹಸುವಿನ ಸಗಣಿಯನ್ನು ಮಸ್ಲಿಲ್ ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಸಗಣಿಯಿಂದ ಗಂಟನ್ನು ಚೆನ್ನಾಗಿ ಇಸುಕಿ ಅದರಲ್ಲಿರುವ ಉಪಯುಕ್ತ ವಸ್ತುಗಳನ್ನು ನೀರಿನಲ್ಲಿ ಸೇರಿಸಬೇಕು.
 ಒಂದು ಲೀ. ನೀರಿನಲ್ಲಿ ಬಕೆಟ್‌ನಲ್ಲಿ 5೦ ಗ್ರಾಂ. ಸುಣ್ಣವನ್ನು ಹಾಕಿ ರಾತ್ರಿಯಿಡೀ ತಟಸ್ಥವಾಗಲು ಇಡಬೇಕು.
 ನಂತರ ಒಂದು ದೊಡ್ಡ ಡ್ರಂನಲ್ಲಿ ಸಗಣಿಯ ಸಾರ, ಸುಣ್ಣದ ದ್ರಾವಣ ಮತ್ತು ಗಂಜಲ ಎಲ್ಲವನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿದಾಗ ಬೀಜಾಮೃತ ದೊರೆಯುತ್ತದೆ.
ಬೀಜಾಮೃತವನ್ನು ಬೀಜೋಪಚಾರ ಮಾಡಲು ಮತ್ತು ಎಲ್ಲಾ ತರಕಾರಿ ಹಣ್ಣು ಮತ್ತು ಇತರೆ ಬೆಳೆಗಳಲ್ಲಿ (ಸಿಂಪರಣೆ) ಉಪಯೋಗಿಸಬಹುದು.
ನೋಡಿ ನಾವೇ ಮನೇಲಿ ಇಷ್ಟನ್ನು ತಯಾರಿಸಿಬಿಟ್ಟರೆ,ಪೇಟೆಗಳಲ್ಲಿ ಸಿಗುವ ರಾಸಾಯನಿಕಗಳ ಮೊರೆ ಹೋಗುವುದು, ಆ ರಾಸಾಯನಿಕಗಳಿಂದ ನಮ್ಮ ಮಣ್ಣಿನ ಫಲವತ್ತತೆ ಹಾಳಾಗುವುದು ತಪ್ಪುತ್ತದೆ.

ನಾಗೇಶ್, ಸಿ. ಆರ್. ಮತ್ತು ಸಹನ. ಎಸ್.ಆರ್.,
ನಾಗೇಶ್, ಸಹಾಯಕ ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ವಿ. ಸಿ. ಫಾರಂ., ಮಂಡ್ಯಸಹನಾ, ಕಿರಿಯ ಸಂಶೋಧನಾ ಸಹಚರರು, ಅಖಿಲ ಭಾರತ ಸುಸಂಘಟಿತ ಕಿರು ಧಾನ್ಯಗಳ ಸಂಶೋಧನಾ ಪ್ರಾಯೋಜನೆ, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ. ಸಿ. ಫಾರಂ., ಮಂಡ್ಯ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group