spot_img
Sunday, September 8, 2024
spot_imgspot_img
spot_img
spot_img

ಯುವ ಕೃಷಿಕನ ಮಾದರಿ ಕೃಷಿ: ಪರಿಶ್ರಮ ಪಟ್ಟರೆ ಸಾಧಿಸಬಹುದೆಂಬುದಕ್ಕೆ ಇವರು ಒಳ್ಳೆ ಉದಾಹರಣೆ

-ಗಣಪತಿ ಹಾಸ್ಪುರ 

ಈ ಯಾಂತ್ರಿಕ ಯುಗದಲ್ಲಿ ಯುವ ಸಮುದಾಯ ನಗರದ ಆಕರ್ಷಣೆಗೆ ಮರುಳಾಗಿ ವಿವಿಧ ಕೆಲಸಗಳನ್ನು ಹುಡುಕುತ್ತ ಪೇಟೆಯ ಕಡೆ ಹೋಗುವವರೆ ಹೆಚ್ಚು. ಒಂದಿಷ್ಟು ಕಲಿತವರು ನೌಕರಿಯತ್ತ ಹೋದರೇ, ಶಾಲೆ ಕಲಿಯಲು ಆಗದವರು ಹೋಟೆಲ್, ಸೆಕ್ಯುರಿಟಿ, ಪ್ಲಾಟ್ ಕಾಯಲು, ಸಿಮೆಂಟ್ ಕೆಲಸ. ಭಿನ್ನ ಭಿನ್ನ ಕೆಲಸಗಳನ್ನು ಮಾಡಲು ಪರ ಊರುಗಳಿಗೆ ಹೋಗುತ್ತಾರೆ. ತಮ್ಮ ಮನೆಯಲ್ಲಿ ಯೋಗ್ಯವಾದ ಜಮೀನು ಇದ್ದರೂ ಅದ್ನ ಸಾಗುವಳಿ ಮಾಡಲು ಮನೆ ಹಿರಿಯರೊಂದಿಗೆ ಕೈಜೋಡಿಸದೇ, ಷಹರದತ್ತ ವಲಸೆ ಹೋಗುವವರೇ ಹೆಚ್ಚಾಗಿದ್ದಾರೆ ಎಂಬ ಅಪಸ್ವರವೂ ಕೇಳಿಬರುತ್ತಿದೆ.

ಗ್ರಾಮೀಣ ಪ್ರದೇಶದ ವಾಸ್ತವಿಕ ಸಂಗತಿ ಹೀಗಿದ್ದರೂ ಸಹಾ ತಮಗಿರುವ ಕೃಷಿ ಭೂಮಿಯನ್ನು ವೈಜ್ಞಾನಿಕ ವಿಧಾನದಲ್ಲಿ ಸಾಗುವಳಿ ಮಾಡುತ್ತಾ ಯೋಗ್ಯ ಫಸಲನ್ನು ಪಡೆದು, ಸಂತೃಪ್ತಿಯಿಂದ ಜೀವನದ ಬಂಡಿ ನಡೆಸುವ ಯುವಕರು ಇದ್ದಾರೆ. ಅಂಥವರಲ್ಲಿ ತುಡುಗುಣಿಯ ವೆಂಕಟ್ರಮಣ ಮರಾಠಿ ಸಹೋದರು ಇದ್ಕೆ ಉತ್ತಮ ನಿದರ್ಶನ. ಉ.ಕ ಜಿಲ್ಲೆಯ ಯಲ್ಲಾಪುರ ತಾಲೂಕಿನ ತುಡುಗುಣಿಯ ನಿವಾಸಿಯಾದ ಶೇಷು ಮರಾಠಿಯ ಮಕ್ಕಳಾದ ವೆಂಕಟ್ರಮಣ ಹಾಗೂ ನಾಗರಾಜ ಮರಾಠಿ ಇವರೇ ಉತ್ಸಾಹಿ ಯುವ ಕೃಷಿಕರು. ಅವರಿಗೆ ಸುಮಾರು ಐದು ಎಕರೆ ಕೃಷಿಭೂಮಿ ಇದೆ.

ಹಿಂದೆ ಈ ಭೂಮಿಯಲ್ಲಿ ಭತ್ತ, ಕಬ್ಬನ್ನು ಬೆಳೆಯುತ್ತಾ ,ಬಂದ ಆದಾಯದಲ್ಲಿ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಅಕ್ಕಪಕ್ಕದ ರೈತರೆಲ್ಲ ಅಡಿಕೆ ತೋಟವನ್ನು ಮಾಡುವುದನ್ನು ನೋಡಿ, ಇವರಿಗೂ ಮಾಡಬೇಕೆಂಬ ಆಸೆ ಮನದಲ್ಲಿ ಮೂಡಿತ್ತು. ಆಮೇಲೆ ವ್ಯವಸ್ಥಿತವಾಗಿ ಸುಧಾರಿತ ಪದ್ದತಿಯಲ್ಲಿ ಹಂತ ಹಂತವಾಗಿ ತಮ್ಮ ಭೂಮಿಯನ್ನು ಅಡಿಕೆ ತೋಟವಾಗಿ ಪರಿವರ್ತಿಸಿದರು. ಈ ಸಹೋದರರು ಪ್ರಧಾನವಾಗಿ ಅಡಿಕೆ ಕೃಷಿ ಮಾಡಿದರೂ ಅವರ ತೋಟದಲ್ಲೀಗ ಕಾಳು ಮೆಣಸು, ಬಾಳೆ, ವೆನಿಲ್ಲಾ, ತೆಂಗು.  ಉಪಬೆಳೆಗಳಿವೆ.

ಒಂದು ಕಡೆ ನದಿ, ಇನ್ನೊಂದು ಬೃಹತ್ ಗುಡ್ಡ ಅವುಗಳ ಮಧ್ಯೆ ಇವರ ಅಡಿಕೆ ತೋಟ ಇದೆ. ಮುಗಿಲೆತ್ತರಕ್ಕೆ ಬಲಿತು ನಿಂತ ಮೆಣಸಿನ ಬಳ್ಳಿಗಳು, ಹೆಮ್ಮರವಾಗಿ ಬೆಳೆದ ತೆಂಗು – ಅಡಿಕೆ ಮರಗಳು , ಒಂದಿಷ್ಟು ಜಾಗದಲ್ಲಿ ಇದ್ದ ವೆನಿಲ್ಲಾ ಬಳ್ಳಿಗಳು. ಅವೆಲ್ಲವನ್ನು ನೋಡುತ್ತಿದ್ದರೇ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ಹೇಳಿಕೊಳ್ಳುವಷ್ಟು ಸಮತಟ್ಟು ಇಲ್ಲದ ಜಾಗದಲ್ಲಿ ವ್ಯವಸ್ಥಿತವಾಗಿ ಅಡಿಕೆ ತೋಟವನ್ನು ಮಾಡಿ, ತೋಟದ ಮದ್ಯ ಟ್ರಾಕ್ಟರ್ ಓಡಾಡುವಷ್ಟು ಜಾಗವನ್ನು ಇರಿಸಿಕೊಂಡು, ಸುವ್ಯವಸ್ಥಿತ ವಾಗಿ ಕೃಷಿ ಮಾಡುತ್ತಿರುವ ಈ ಸಹೋದರರ ಸಾಹಸ ನಿಜಕ್ಕು ಹೆಮ್ಮಯ ಸಂಗತಿ. ಸಮೃದ್ಧ ತೋಟ!

ತುಡುಗುಣಿಯ ವೆಂಕಟ್ರಮಣ ಹಾಗೂ ನಾಗರಾಜ ಮರಾಠಿ ಸ್ವಪರಿಶ್ರಮ ಪಡುವ ಉತ್ಸಾಹಿ ಯುವಕರು. ತಮ್ಮಲ್ಲಿ ಆಗುವುದೇ ಇಲ್ಲ ಅಂಥ ಕೈಕಟ್ಟಿ ಕೂರುವ ಹುಡುಗರಲ್ಲ. ಮೈ ಮುರಿದು ದುಡಿದರೇ ಭೂತಾಯಿ ನಮ್ಮನ್ನು ಕೈಬಿಡುವುದಿಲ್ಲ ಎಂಬ ಆತ್ಮವಿಶ್ವಾಸ ಇವರಲ್ಲಿ ಜಾಗ್ರತ ಆಗಿದ್ದರಿಂದ, ತಮಗಿರುವ ಭೂಮಿಯನ್ನು ಸುಧಾರಿತ ಪದ್ದತಿಯಲ್ಲಿಯೇ ಸಾಗುವಳಿ ಮಾಡುತ್ತಾ ಇದ್ದಾರೆ. ಮಳೆ ಬೀಳುವ ಮೊದಲೇ ಮನೆಯ ದಡ್ಡಿಗೊಬ್ಬರವನ್ನು ಪ್ರತಿ ಗಿಡಗಳಿಗೆ ಹಾಕಿ, ವ್ಯವಸ್ಥಿತವಾಗಿ ಮುಚ್ಚಿಗೆ ಮಾಡುತ್ತಾರೆ.

ಎನ್.ಪಿ.ಕೆ ರಾಸಾಯನಿಕ ಗೊಬ್ಬರವನ್ನು ಪ್ರತಿ ಗಿಡಕ್ಕೆ ಇನ್ನೂರು ಗ್ರಾಮ್ ನಷ್ಟು ನೀಡಿ ಸಂರಕ್ಷಿಸುತ್ತಾರೆ. ಹನಿ ನೀರಾವರಿಯನ್ನು ಅಳವಡಿಸಿಕೊಂಡಿರುವ ಈ ಸಹೋದರರು ಸಕಾಲದಲ್ಲಿ ಎಲ್ಲ ಕೆಲಸಗಳನ್ನು ಮಾಡುತ್ತಾ ಇರುವುದರಿಂದ ಯೋಗ್ಯ ಫಲವನ್ನು ಪಡೆಯುತ್ತಾ ಇದ್ದಾರೆ. ಹೊಸದಾಗಿ ಹಚ್ಚಿದ ಗಿಡಗಳು ಈಗಷ್ಟೆ ಹೊಸ ಫಲ ನೀಡುತ್ತಿವೆ. ಎಲ್ಲರಂತೆ ನಮ್ ತೋಟದಲ್ಲಿ ಅಡಿಕೆ ಮರಗಳು ಬಲಿಷ್ಟವಾಗಿ ಬಲಿತಿವೆ. ನಾವು ಅಂದುಕೊAಡಷ್ಟು ಬೆಳೆ ಬರದಿದ್ದರೂ ಕಳೆದ ಸೀಜನ್ನಲ್ಲಿ ಸುಮಾರು ಇಪ್ಪತೈದು ಕ್ವಿಂಟಲ್ ಮಾಡಿದ್ದೇವೆ ಎನ್ನುತ್ತಾರೆ ವೆಂಕಟ್ರಮಣ ಮರಾಠಿ. ಈ ಮರಾಠಿ ಸಹೋದರರ ತೋಟವನ್ನು ಸುತ್ತಿದರೇ ಮನಸ್ಸಿಗೆ ಹಿತವಾಗುತ್ತದೆ. ಮತ್ತೆ ಮತ್ತೆ ನೋಡಬೇಕೆಂಬ ತವಕ. ಸಮೃದ್ಧವಾಗಿ ಬಲಿತ ಅಡಿಕೆ ಮರಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ! ಸಮತಟ್ಟು ಅಲ್ಲದ ಜಾಗದಲ್ಲಿ ತೋಟವನ್ನು ಹಾಕಿ ಬೇರೆ ಬೇರೆ ಬೆಳೆಗಳನ್ನು ಹೇಗೆ ಬೆಳೆಯಬಹುದು, ಜಾಗದ ಸದ್ಬಳಕೆ ಹೇಗೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇವರ ತೋಟ ಮಾದರಿ ಆಗಿದೆ ಎಂದರೂ ತಪ್ಪಾಗಲಾರದು.

ಕಂಗೊಳಿಸುವ ಮೆಣಸು!

ತುಡುಗುಣಿಯ ಈ ಉತ್ಸಾಹಿ ಕೃಷಿ ಯುವಕರು ಕೇವಲ ಅಡಿಕೆ ಮರಕ್ಕೆ ಜೋತು ಬೀಳದೆ, ಕಪ್ಪು ಬಂಗಾರ ಕೃಷಿಯನ್ನು ಸಹಾ ಸುಧಾರಿತ ಪದ್ದತಿ ಯಲ್ಲಿ ಮಾಡುತ್ತಾ ಇದ್ದಾರೆ. ಸ್ಥಳೀಯ ರೈತರಿಂದಲೇ ಮೆಣಸಿನ ಬಳ್ಳಿಗಳನ್ನು ನೆಟ್ಟು ಜೋಪಾನ ಮಾಡಿ ಪೋಷಣೆ ಮಾಡಿದ ಸಹೋದರರು ಒಂದು ಸೀಜನ್ನಿನಲ್ಲಿ ಮೂರು ಭಾರಿ ತುತ್ತು ಸುಣ್ಣ ಸಿಂಪಡಿಸುತ್ತಾರೆ. ಮಳೆಗಾಲ ಶುರುವಾದಾಗ ಬೈಟೇಕ್ಸ ನ್ನ ಎರಡು ಭಾರಿ ಹಾಯಿಸುತ್ತಾರೆ. ಅವರ ತೋಟದಲ್ಲಿ ಸುಮಾರು ಆರೇಳು ನೂರು ಬಳ್ಳಿಗಳಿದ್ದು ಅವೆಲ್ಲ ಹುಲುಸಾಗಿ ಬೆಳೆದು ನಿಂತು, ಯೋಗ್ಯ ಫಲ ನೀಡುತ್ತಿವೆ. ಕಳೆದ ಸೀಜನ್ನಿನಲ್ಲಿ ಎಂಟು ಕ್ವಿಂಟಲ್ ಆಗಿತ್ತು. ಈ ಭಾರಿ ಅಪ್ಪುಟು ಮೆಣಸುಇಲ್ರ. ಎಲ್ಲ ಗಿಡ್ಡ ಗಿಡ್ಡ ಖರೆ, ಅದ್ರಲ್ಲೂ ಸರಿ ಕಾಳು ಇಲ್ಲ ಎನ್ನುತ್ತಾರೆ ವೆಂಕಟ್ರಮಣ ಮರಾಠಿ.

ವೆನಿಲ್ಲಾವೂ ಉಂಟು

ಇವರ ತೋಟದಲ್ಲಿ ಬಂಗಾರದ ಬೆಳೆಯಾದ ವೆನಿಲ್ಲ ಕೃಷಿಯೂ ಇದೆ. ಹಿಂದೆ ಹತ್ತಾರು ಬಳ್ಳಿ ಮನೆ ಸಮೀಪ ಹಚ್ಚಿದ್ದೆ. ಅದ್ನ ಈಗ ಮುಂಡದ ತೋಟದಲ್ಲಿ ಬೆಳೆಸಿದ್ದೇನೆ. ಅದ್ಕು ಕೊಳೆ ಬರ್ತದೆ ಮಾರಾಯ್ರೆ….ತುತ್ತ ಸುಣ್ಣ ಸಿಂಪಡಿಸಿ ಕಂಟ್ರೊಲ್ ಮಾಡಿದ್ದೇನೆ ಎನ್ನುತ್ತಾರೆ. ಕಳೆದ ಸೀಜನ್ನಿನಲ್ಲಿ ಏರೆಳು ಕೆ.ಜಿ ವೆನಿಲ್ಲ ಬಿನ್ಸ ಸಿಕ್ಕಿತ್ತು. ಈ ವರುಷ ಈಗಷ್ಟೇ ಹೂ ಬಿಡುತ್ತಾ ಇದೆ. ಬಳ್ಳಿಯ ಸಂಖ್ಯೆ ಹೆಚ್ಚು ಇರುವುದರಿಂದ ಬೆಳೆ ಸ್ವಲ್ಪ ಹೆಚ್ಚು ಸಿಕ್ತದ್ಯನ ಎನ್ನುತ್ತಾರೆ ಅವರು. ನಮಗೆ ಏಷ್ಟು ಭೂಮಿ ಇದೆ ಎನ್ನುವುದು ಮುಖ್ಯವಲ್ಲ. ಇರುವ ಕೃಷಿ ಭೂಮಿಯನ್ನು ಹೇಗೆ ಅಭಿವೃದ್ಧಿ ಮಾಡಬೇಕು, ಯಾವೆಲ್ಲ ಬೆಳೆಗಳನ್ನು ಮಾಡಿದರೇ ನಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಇರುವ ಭೂಮಿಯನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು….ಎಂಬುದಕ್ಕೆ ಈ ಸಹೋದರರ ಕೃಷಿ ಭೂಮಿ ಮಾದರಿ ಆಗಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group