spot_img
Monday, June 16, 2025
spot_imgspot_img
spot_img

ತೋಟಗಾರಿಕಾ ಬೆಳೆಗಳಿಂದ ಇಮ್ಮಡಿ ಆದಾಯ, 5 ಕೃಷಿಕರ ಯಶೋಗಾಥೆ ಇಲ್ಲಿದೆ

-ಅಡ್ಡೂರು ಕೃಷ್ಣ ರಾವ್

ಪಾರಂಪರಿಕ ಬೆಳೆಗಳ ಬದಲಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಸಿ ಇಮ್ಮಡಿ ಆದಾಯ ಗಳಿಸಲು ಸಾಧ್ಯವೇ? ಸಾಧ್ಯವೆಂದು ತೋರಿಸಿಕೊಟ್ಟಿರುವ ಐವರು ಕೃಷಿಕರ ಸಾಧನೆಯ ಬಗ್ಗೆ ಈ ಬರಹ.

ಮೊದಲನೆಯವರು ಮಧ್ಯಪ್ರದೇಶದ ಕಾಂಚನ ವರ್ಮಾ. ಮಧ್ಯಪ್ರದೇಶದ ನರ್ಮದಾಪುರಂನ ಇತರ ರೈತರಂತೆ ಕಾಂಚನ ವರ್ಮಾ ಅವರೂ ಗೋಧಿ ಬೆಳೆಯುತ್ತಿದ್ದರು. ಅದರಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯವಿಲ್ಲ ಎಂದು ಮನಗಂಡ ಆಕೆ ಅರಿಶಿನ ಬೆಳೆಸಲು ಶುರು ಮಾಡಿದರು.

“ಗೋಧಿ ಬೆಳೆಸುವಾಗ ನಮ್ಮ ವಾರ್ಷಿಕ ಆದಾಯ ಎಕರೆಗೆ 1.5 ಲಕ್ಷ ರೂಪಾಯಿ. ಈಗ ಅರಿಶಿನ ಬೆಳೆಸಲು ಎಕರೆಗೆ 50,000 ರೂಪಾಯಿ ವೆಚ್ಚ ಮಾಡುತ್ತಿದ್ದು ನಮ್ಮ  ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಆಗಿದೆ” ಎಂದು ತಿಳಿಸುತ್ತಾರೆ ಅವರು. ವರುಷಕ್ಕೆ 400 ಕ್ವಿಂಟಾಲ್ ಅರಿಶಿನ ಕೊಯ್ಲು ಮಾಡುತ್ತಿರುವ ಕಾಂಚನ ಅದರ ಮಾರಾಟದಿಂದ ಗಳಿಸುವ ಒಟ್ಟು ಆದಾಯ      12 ಲಕ್ಷ ರೂಪಾಯಿ. ಅರಿಶಿನವನ್ನು ಹುಡಿ ಮಾಡಿ, ಒಂದು ಕಿಗ್ರಾ ಪ್ಯಾಕೆಟುಗಳಾಗಿ ಮಾಡಿ ತನ್ನ ಹೊಲದಿಂದಲೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಎರಡನೆಯವರು ಮಹಾರಾಷ್ಟ್ರದ ಹೃಷಿಕೇಶ ಜಯಸಿಂಗ್ ಧಾನೆ. ಸತಾರಾದ ಪಡಾಲಿ ಗ್ರಾಮದಲ್ಲಿದೆ ಅವರ ಎಂಟು ಎಕರೆ ಜಮೀನು. ಅಲ್ಲಿ ಭತ್ತ, ಸಜ್ಜೆ, ಜೋಳ ಮತ್ತು ಗೋಧಿ ಬೆಳೆಯುತ್ತಿದ್ದರು. ಕಷ್ಟಪಟ್ಟು ದುಡಿದರೂ ಉತ್ತಮ ಫಸಲು ಸಿಗುತ್ತಿರಲಿಲ್ಲ.

ಹಾಗಾಗಿ ಅವರು ಲೋಳೆಸರ ಬೆಳೆಸಲು ಶುರುವಿಟ್ಟರು. ಮಾತ್ರವಲ್ಲ, ತಾನು ಬೆಳೆಸಿದ ಲೋಳೆಸರವನ್ನು ಸಂಸ್ಕರಿಸಿ, ಮಲ್ಯವರ್ಧಿತ ಉತ್ಪನ್ನಗಳಾದ ಸಾಬೂನು, ಶಾಂಪೂ ಮತ್ತು ಜ್ಯೂಸ್ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಅವರ ವಾರ್ಷಿಕ ವಹಿವಾಟು ರೂ. 3.5 ಕೋಟಿ.

ಅವರು ಹೇಳುತ್ತಾರೆ, “ನಾನು ಲೋಳೆಸರದ ಸಸಿಗಳನ್ನು ನೆಟ್ಟಾಗ ನನ್ನ ಗ್ರಾಮದವರು ಮುಳ್ಳಿನ ಗಿಡಗಳಿಂದ ದುರಾದೃಷ್ಟ ಬರುತ್ತದೆಯೆಂದು ಎಚ್ಚರಿಸಿದರು. ಆಗ ನಾನು ಮಣ್ಣಿನ ಗೋಡೆಗಳ ಮನೆಯಲ್ಲಿ ವಾಸ ಮಾಡುತ್ತಿದ್ದರೆ, ಈಗ ಎರಡು ಮಹಡಿಗಳ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಮತ್ತು ಫಾರ್ಚ್ಯುನರ್ ಕಾರಿನಲ್ಲಿ ಸುತ್ತಾಡುತ್ತಿದ್ದೇನೆ.”

ಮೂರನೆಯವರು ಮಹಾರಾಷ್ಟ್ರದ ಮಹೇಶ್ ಅಸಬೆ. ಪಾರಂಪರಿಕವಾಗಿ ಅಕೋಲಾ ಗ್ರಾಮದ ತಮ್ಮ ಜಮೀನಿನಲ್ಲಿ ಅವರು ಬೆಳೆಯುತ್ತಿದ್ದದ್ದು ದಾಳಿಂಬ, ಸೀತಾಫಲ ಮತ್ತು ದ್ರಾಕ್ಷಿ. ಆದರೆ ಅನಿರೀಕ್ಷಿತ ಮಳೆ ಮತ್ತು ಆಲಿಕಲ್ಲು ಸುರಿತದಿಂದಾಗಿ ಈ ಬೆಳೆಗಳನ್ನು ಬೆಳೆಸುವುದು ಸವಾಲಿನ ಕೆಲಸವಾಯಿತು.

ಆದ್ದರಿಂದ ಅವರು ತಮ್ಮ 20 ಎಕರೆ ಜಮೀನಿನಲ್ಲಿ ಡ್ರಾಗನ್ ಹಣ್ಣು ಕೃಷಿಗೆ ತೊಡಗಿದರು. ಈಗ ಹತ್ತಿರದ ಕೊಲ್ಹಾಪುರ ಮತ್ತು ಸಾಂಗ್ಲಿ ಮಾರುಕಟ್ಟೆಯಲ್ಲಿ ತಮ್ಮದೇ ಗ್ರಾಹಕರ ಜಾಲ ಹೊಂದಿದ್ದಾರೆ. ಹಂಗಾಮಿನಲ್ಲಿ ಕನಿಷ್ಠ 200 ಟನ್ ಡ್ರಾಗನ್ ಹಣ್ಣು ಮಾರಾಟ ಮಾಡುವ ಅವರ ವಾರ್ಷಿಕ ಆದಾಯ ರೂ. 2 ಕೋಟಿ.

ನಾಲ್ಕನೆಯವರು ರಾಜಸ್ಥಾನದ ಶಂಕರ್ ಮೀನಾ. ಅವರು ತನ್ನ ಹಳ್ಳಿಯ ಗೋಧಿ ಮತ್ತು ಸಾಸಿವೆ ಹೊಲಗಳಲ್ಲಿ ಆಟವಾಡುತ್ತಾ ಬಾಲ್ಯ ಕಳೆದವರು. ತನ್ನ ತಂದೆ ಹೊಲದಲ್ಲಿ ಅವಿಶ್ರಾಂತವಾಗಿ ದುಡಿಯುವುದನ್ನು ಕಾಣುತ್ತಾ ಬೆಳೆದವರು. ಪ್ರಾಕೃತಿಕ ವಿಕೋಪಗಳಿಂದಾಗಿ ಬೆಳೆ ಹಾಳಾಗಿ, ಫಸಲು ನಷ್ಟವಾಗಿ, ಆದಾಯ ಕುಸಿದುದನ್ನು ಕಂಡು ನೊಂದವರು.

 

ಕೆಲವು ವರುಷಗಳ ನಂತರ ಅವರು “ಜೀವನ್ ಮಶ್ರೂಮ್” ಕೃಷಿಉದ್ಯಮ ಸ್ಥಾಪಿಸಿದರು. ಇದು ಅಣಬೆ ಬೀಜ, ಭತ್ತದ ಹುಲ್ಲು ಇತ್ಯಾದಿ ಅಣಬೆ ಕೃಷಿಗೆ ಬೇಕಾದ ಒಳಸುರಿಗಳನ್ನು ಮಾರಾಟ ಮಾಡುತ್ತದೆ. ತನ್ನ ಪ್ರಯೋಗಾಲಯದಲ್ಲಿ ಕ್ರಿಮಿಶುದ್ಧ ವಾತಾವರಣದ ಮೂಲಕ ಉತ್ಪಾದಕತೆ ಹೆಚ್ಚಿಸಲಿಕ್ಕಾಗಿ ಸುಧಾರಿತ ಉಪಕರಣಗಳನ್ನು ಅಳವಡಿಸಿಕೊಂಡರು: ಬೀಜ ಮೊಳಕೆ ಬರಿಸುವ ಸಂಪುಟಗಳು, ಊರ್ಧ್ವ ಸ್ವತಾಪಕಾರಿ (ವರ್ಟಿಕಲ್ ಆಟೋಕ್ಲೇವ್), ಲ್ಯಾಮಿನರ್ ಗಾಳಿಸುತ್ತುವ ಸಂಪುಟ ಇತ್ಯಾದಿ.

ಈಗ ಶಂಕರ್ ಮೀನಾ ವರುಷಕ್ಕೆ 80 ಟನ್ ಅಣಬೆ ಬೀಜ ಉತ್ಪಾದಿಸುತ್ತಾರೆ. ಅದರ ಮಾರಾಟ ದರ ಕಿಲೋಕ್ಕೆ ರೂ.90 –  ರೂ.115. ಈ ಬೀಜಗಳಿಗೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಛತ್ತೀಸ್-ಘರ್, ಪಂಜಾಬ್, ಹರಿಯಾಣ, ಜಾರ್ಖಂಡ್ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ಉತ್ತಮ ಬೇಡಿಕೆಯಿದೆ. ಜೊತೆಗೆ, ಅವರು ರಫ್ತು ಮೂಲಕ  ವಿದೇಶಗಳಲ್ಲಿಯೂ ತನ್ನ ಮಾರಾಟ ಜಾಲ ವಿಸ್ತರಿಸಿಕೊಂಡಿದ್ದಾರೆ: ಭೂತಾನ್, ನೇಪಾಳ ಮತ್ತು ಯುಎಇ ದೇಶಗಳಿಗೆ. ಇದರಿಂದ ಅವರು ಗಳಿಸುವ ಮಾಸಿಕ ಆದಾಯ ರೂ.13 ಲಕ್ಷ.

ಐದನೆಯವರು ಉತ್ತರ ಪ್ರದೇಶದ ಆನಂದ್ ಮಿಶ್ರಾ. ಪಾರಂಪರಿಕವಾಗಿ ಇವರ ಕುಟುಂಬ ಭತ್ತ, ಗೋಧಿ, ಕಡಲೆ ಮತ್ತು ತೊಗರಿ ಬೆಳೆಗಳನ್ನು ಬೆಳೆಸುತ್ತಿತ್ತು. ಆದರೆ ಆನಂದ್ ಮಿಶ್ರಾ ವರುಷವಿಡೀ ಬೇಡಿಕೆಯಿರುವ ಗಜನಿಂಬೆ ಬೆಳೆಸಲು ಶುರು ಮಾಡಿದರು.

“ನನ್ನ ಜಿಲ್ಲೆಯಲ್ಲಿ ಯಾರೂ ಗಜನಿಂಬೆ ಬೆಳೆಯುತ್ತಿರಲಿಲ್ಲ. ಅದು ಹೊಸ ಬೆಳೆಯಾದರೂ ನಾನು ರಿಸ್ಕ್ ತೆಗೆದುಕೊಳ್ಳಲು ತಯಾರಾದೆ. ಇದನ್ನು ಚೆನ್ನಾಗಿ ಬೆಳೆಸಲು ಕಲಿಯುತ್ತೇನೆ ಅಥವಾ ನಷ್ಟ ಮಾಡಿಕೊಳ್ಳುತ್ತೇನೆ ಎಂದು ನನಗೆ ತಿಳಿದಿತ್ತು” ಎನ್ನುತ್ತಾರೆ ಆನಂದ್ ಮಿಶ್ರಾ.

ಗಜನಿಂಬೆ ಕೃಷಿಯಲ್ಲಿ ಅವರು ಯಶಸ್ವಿಯಾದರು. “ಪಾರಂಪರಿಕ ಬೆಳೆಗಳನ್ನು ಬೆಳೆಸಿದ್ದರೆ ಎಷ್ಟು ಆದಾಯ ಬರುತ್ತಿತ್ತೋ ಈಗ ನಾನು ಅದಕ್ಕಿಂತ ಕನಿಷ್ಠ ಐದು ಪಟ್ಟು ಜಾಸ್ತಿ ಆದಾಯ ಗಜನಿಂಬೆಯಿಂದ ಗಳಿಸುತ್ತಿದ್ದೇನೆ” ಎಂದು ತಿಳಿಸುತ್ತಾರೆ ಆನಂದ್ ಮಿಶ್ರಾ. ಅಂದರೆ ಪಾರಂಪರಿಕ ಬೆಳೆಗಳಿಂದ ವಾರ್ಷಿಕ ರೂ. 40,000ದಿಂದ ರೂ. 50,000 ಗಳಿಸುವ ಬದಲಾಗಿ ಈಗ ತನ್ನ ಎರಡೂವರೆ ಎಕರೆ ಗಜಾನಿಂಬೆ ತೋಟದಿಂದ ವಾರ್ಷಿಕ ರೂ. 7 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಗಮನಿಸಿ: ಪಾರಂಪರಿಕ ಬೆಳೆಗಳನ್ನು ಬೆಳೆಯುವ ರೈತರಿಗೆ ಫಸಲು ಕೊಯ್ಲು ಮಾಡಿದ ನಂತರ ಅದನ್ನು ಮಾರಾಟ ಮಾಡಿ ಆದಾಯ ಕೈಸೇರುವಾಗ ಮೂರ್ನಾಲ್ಕು ತಿಂಗಳು ತಗಲುತ್ತದೆ. ಆಗ, ಮುಂದಿನ ಬೆಳೆಗಳ ಬಿತ್ತನೆ ಹಾಗೂ ನಾಟಿಗೆ ಅವರು ತಯಾರಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರು ಸಾಲದ ಸುಳಿಯಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.

ತೋಟಗಾರಿಕಾ ಬೆಳೆಗಳ ಕೃಷಿ ಶುರು ಮಾಡಿದರೆ, ಫಸಲು ಪಡೆದು, ಮಾರಾಟ ಮಾಡಿ ಆದಾಯ ಗಳಿಸಲು ಕನಿಷ್ಠ ಮೂರು ವರುಷ ಕಾಯಬೇಕಾಗುತ್ತದೆ. ಆದ್ದರಿಂದ ಬಹುಪಾಲು ರೈತರು ಪಾರಂಪರಿಕ ಬೆಳೆಗಳ ಬದಲಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರಿಸ್ಕ್ ತೆಗೆದುಕೊಳ್ಳಲು ತಯಾರಾಗುವುದಿಲ್ಲ. ಆದರೆ, ಇಲ್ಲಿ ಉದಾಹರಿಸಿರುವ ಐವರು ರೈತರಂತೆ ಸಮರ್ಪಕ ತಯಾರಿ ನಡೆಸಿ, ತಮ್ಮ ಜಮೀನಿಗೆ ಸೂಕ್ತವಾದ ತೋಟಗಾರಿಕಾ ಬೆಳೆ ಬೆಳೆಸಿ, ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಂಡರೆ ವಾರ್ಷಿಕ ಆದಾಯವನ್ನು ಕನಿಷ್ಠ ಎರಡು ಪಟ್ಟು ಹೆಚ್ಚಿಸಿಕೊಳ್ಳಲು ಸಾಧ್ಯ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group