ಎಥೆನಾಲ್, ಇತ್ತೀಚಿಗಿನ ದಿನಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ. ಕಚ್ಚಾತೈಲದ ಬೆಲೆ ಹೆಚ್ಚಾಗುತ್ತಿದೆ. ವಿದೇಶಿ ವಿನಿಮಯದ ಹೊರೆ ವಿಪರೀತವಾಗುತ್ತಿದೆ. ಎಥೆನಾಲ್ ಉತ್ಪಾದನೆ ದೇಶದಲ್ಲಿ ಹೆಚ್ಚಿತೆಂದರೆ ತೈಲ ಉತ್ಪಾದಿತ ರಾಷ್ಟ್ರಗಳ ಅವಲಂಬನೆ ಕಡಿಮೆಯಾಗಬಹುದು. ದೇಶೀಯ ಇಂಧನದಲ್ಲಿ ಸ್ವಾವಲಂಬಿಯಾಗಬಹುದು. ಬ್ಯಾಟರಿ, ಸೌರ ವಿದ್ಯುತ್ ಹಾಗೂ ಜೈವಿಕ ಇಂಧನ ಚಾಲಿತ ವಾಹನಗಳು ಪರಿಸರ ಸ್ನೇಹಿ, ಹೀಗೆಲ್ಲಾ ಮಾತಿನ ಮಧ್ಯೆ ಹಾದು ಹೋಗುತ್ತದೆ.

ರೈತರಿಗೆ ಏನು ಪ್ರಯೋಜನ : ಎಥೆನಾಲ್ ಉತ್ಪಾದನೆಯಲ್ಲಿ ಕಬ್ಬು ಹೆಚ್ಚು ಬಳಕೆಯಾಗುತ್ತಿದೆ ಎಂಬ ನಂಬಿಕೆ ಗಾಢವಾಗಿದ್ದರೂ ಅಕ್ಕಿ, ಜೋಳ, ಗೋಧಿಯಿಂದ ಅದಕ್ಕಿಂತ ಹೆಚ್ಚು ಉತ್ಪಾದನೆಯಾಗುತ್ತಿದೆ ಎನ್ನಲಾಗುತ್ತಿದೆ. ಮರಗೆಣಸು ಸಿಹಿಗೆಣಸು, ಬಟಾಟೆ, ಕೃಷಿ ತ್ಯಾಜ್ಯಗಳಿಂದಲೂ ತಯಾರಿಸಬಹುದು ಎಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗಿದೆ. ಕಬ್ಬು, ಅಕ್ಕಿ, ಗೋಧಿ, ಜೋಳ ಇವೆಲ್ಲವೂ ಆಹಾರ ಪದಾರ್ಥಗಳು. ಬಹುಶಃ ಇಂಧನವಾಗಿ ಹೆಚ್ಚು ಬಳಕೆಯಾದರೆ ರೈತರಿಗೆ ಅದರಿಂದಾಗುವ ಪ್ರಯೋಜನವೇನು ಎಂಬ ಪ್ರಶ್ನೆ ಹಲವರಲ್ಲಿದೆ.
ಬಿತ್ತಿ ಬೆಳೆದವನ ಕೈ ಯಾವಾಗಲೂ ಬರಿದಾಗಿರುತ್ತದೆ. ಏಕೆಂದರೆ ಕೃಷಿ ಮಾಡಿ ಉತ್ಪನ್ನಗಳು ಮನೆಗೆ ತರುವ ಹೊತ್ತಿಗೆ ಮಾರುಕಟ್ಟೆಯಲ್ಲಿ ದರ ಕುಸಿದಿರುತ್ತದೆ. ಕೃಷಿಕನ ಉತ್ಪನ್ನಗಳೆಲ್ಲವೂ ಮಾರುಕಟ್ಟೆಗೆ ಬಂತೆಂದರೆ ದರವೇರುತ್ತದೆ. ಬೆಲೆ ಹೆಚ್ಚಳದ ಪ್ರಯೋಜನ ರೈತರ ಪಾಲಿಗೆ ಮರೀಚಿಕೆಯೇ. ಎಥೆನಾಲ್ ಇಂಧನವಾಗಿ ಬಳಕೆ ಮಾಡುವುದರಿಂದ ಕಬ್ಬು, ಅಕ್ಕಿ, ಗೋಧಿ, ಜೋಳ, ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಸ್ಥಿರ ಅಥವಾ ಉತ್ತಮ ದರ ಸಿಗಬಹುದು. ದುಡಿಮೆಗೆ ತಕ್ಕ ಪ್ರತಿಫಲ ಅದರಿಂದ ಬರುತ್ತದೆ ಎಂದಾದರೆ ರೈತರ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಎಥೆನಾಲ್ ಉತ್ಪಾದಕ ಕಾರ್ಖಾನೆ, ಕಂಪನಿಗಳು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು ರೈತರ ಜಮೀನಿನಲ್ಲಿ ಬೆಳೆಸಿ ಖರೀದಿಸಿದರೆ ರೈತರಿಗೂ ಅನುಕೂಲ. ಇದರಿಂದ ರೈತರ ವಾರ್ಷಿಕ ಆದಾಯ ಹೆಚ್ಚಿ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗಬಹುದು.
ಬೆಲೆಯೇರುವ ಸಾಧ್ಯತೆ:
ಕಬ್ಬು ಬೆಳೆದ ಬೆಳೆಗಾರರಿಗೆ ಉತ್ತಮ ಬೆಲೆ ಸಿಗದಿದ್ದರೂ ಸಕ್ಕರೆಯ ಬೆಲೆ ಹೆಚ್ಚಾಗಿದೆ. ಅದರಂತೆ ಅಕ್ಕಿ, ಗೋಧಿ, ಜೋಳ ಎಥೆನಾಲಿಗೆ ಬಳಕೆಯಾದರೆ ಮಾರುಕಟ್ಟೆಯಲ್ಲಿ ಅದರ ಬೆಲೆಯೂ ಹೆಚ್ಚಾಗುತ್ತದೆ. ಆಹಾರ ಧಾನ್ಯಗಳ ಬೆಲೆ ಹೆಚ್ಚಾದರೆ ಜನಸಾಮಾನ್ಯರ ಮೇಲೆಯೂ ಹೊರೆಬೀಳುತ್ತದೆ. ಇದಲ್ಲದೆ ಪಶು ಆಹಾರ ಉದ್ಯಮದಲ್ಲಿಯೂ ಈ ಆಹಾರ ಧಾನ್ಯ ಬಳಕೆಯಾಗುತ್ತಿರುವುದರಿಂದ ಅದರ ಬೆಲೆಯೂ ಹೆಚ್ಚಾಗಬಹುದು.
ಕಬ್ಬು, ಭತ್ತ, ಗೋಧಿ, ಜೋಳ ಇವೆಲ್ಲವೂ ಮಳೆ ಮತ್ತು ನೀರಾವರಿ ಆಶ್ರಯದಲ್ಲಿ ಬೆಳೆಯುವ ಬೆಳೆಗಳು. ನೀರಿನ ಉಪಯೋಗ ಹೆಚ್ಚಾದರೆ ನೀರಿನ ಸಮಸ್ಯೆಯುಂಟಾಗುತ್ತದೆ. ಮಳೆ ನೀರು ಕೊಯ್ಲು, ಜಲ ಮರುಪೂರಣ, ಕೃಷಿಹೊಂಡಗಳನ್ನು ನಿರ್ಮಿಸಿ ಮಳೆಯ ನೀರನ್ನು ಹಿಡಿದಿಟ್ಟು ಅದನ್ನು ಉಪಯೋಗಿಸುವ ಜಾಗೃತಿ ಮೂಡಿಸಬೇಕು. ನೀರಾವರಿ ಸಾಧ್ಯತೆಯ ಪ್ರದೇಶಕ್ಕೆ ಅನುಕೂಲಕ್ಕೆ ತಕ್ಕಂತೆ ಬೆಳೆಯಲು ಪ್ರೋತ್ಸಾಹಿಸಬೇಕು. ಇಲ್ಲವಾದರೆ ನೀರಿನ ಅಭಾವ ತಲೆದೋರಬಹುದು.

ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೆ ಇಥೆನಾಲ್ ಆವಶ್ಯಕತೆಯಿದೆ. ಕೇಂದ್ರ ಸರಕಾರದ ನಿಲುವು ಅಂತಹದ್ದೇ ಆಗಿದೆ. ಮುಂದಿನ ದಿನಗಳಲ್ಲಿ ಪೂರ್ಣವಾಗಿ ಎಥೆನಾಲ್ ನಿಂದಲೇ ಓಡಾಡುವ ವಾಹನಗಳ ಬರಬೇಕು. ಇ ೨೦ಯಿಂದ ಹಳೆ ವಾಹನಗಳನ್ನು ಹೊಂದಿದವರಿಗೆ ಸಮಸ್ಯೆ ಸೃಷ್ಟಿಯಾಗಿರುವುದು ಸುಳ್ಳಲ್ಲ. ಈ ವಾಹನಗಳು ಎಥೆನಾಲ್ ಮಿಶ್ರಿತ ಪೆಟ್ರೋಲಿಗೆ ಪೂರಕವಾಗಿ ವಾಹನದಲ್ಲಿ ಬದಲಾವಣೆಗಳಾಗಿರುವುದಿಲ್ಲ. ಶೇಕಡ ನೂರು ಎಥೆನಾಲ್ ಇಂಧನದ ವಾಹನಗಳು ಬರಬೇಕಾಗಿದೆ. ಬ್ಯಾಟರಿ,ಸೌರವಿದ್ಯುತ್, ಹಾಗೂ ಸಸ್ಯ ಇಂಧನ ಚಾಲಿತ ವಾಹನಗಳು ರಸ್ತೆಗೆಯುವ ಅನಿವಾರ್ಯತೆ ನಮ್ಮ ಮುಂದಿದೆ.

ಇಂಧನ ತಯಾರಿ ಕಂಪೆನಿಗಳಿಗೆ ಸಾಲ ಸೌಲಭ್ಯ ಸಹಾಯ ಧನ ನೀಡಿದರೆ ಸಾಲದು. ರೈತರರಿಗೂ ಸಹಾಯಧನ, ಪ್ರೋತ್ಸಾಹದ ಯೋಜನೆಗಳು ಜಾರಿಯಾಗಬೇಕು. ಇ ಇಂಧನ ಗ್ರಾಹಕನಿಗೂ ಕಡಿಮೆ ಬೆಲೆಯಲ್ಲಿ ಪೂರೈಕೆಯಾಗಬೇಕು. ರೈತರಿಗೆ, ಇಂಧನ ತಯಾರಕರಿಗೆ ಹಾಗೂ ಗ್ರಾಹಕನಿಗೆ ಇದರ ಲಾಭ ದೊರೆಯಬೇಕು. ಕಬ್ಬು ,ಅಕ್ಕಿ, ಗೋಧಿ, ಜೋಳ ಇವಿಷ್ಟೇ ಅಲ್ಲದೆ ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಹಾಗೂ ಇಂಧನ ತಯಾರಿಬಹುದಾದ ಮರಗೆಣಸು, ಬಳ್ಳಿ ಗೆಣಸು (ಸಿಹಿಗೆಣಸು), ಬಟಾಟೆ ಮೊದಲಾದುವುಗಳಿಂದ ಇಂಧನ ತಯಾರಿಕೆಗೆ ಒತ್ತು ಮತ್ತು ರೈತರಿಗೆ ಬೆಂಬಲ ನೀಡಿದರೆ ಹೆಚ್ಚು ಪ್ರಯೋಜನಕಾರಿಯಾದೀತು.
-ನವಜಾತ ಕಾರ್ಕಳ







