spot_img
Sunday, September 8, 2024
spot_imgspot_img
spot_img
spot_img

ಕೊಳವೆ ಬಾವಿಗೆ ಜಲ ಮರು ಪೂರಣಕ್ಕೆ ಇಲ್ಲಿದೆ ಸರಳ ತಂತ್ರ!

ರಾಜ್ಯದಲ್ಲಿ ಮುಂಗಾರ ಉತ್ತಮವಾಗಿ ಸುರಿಯುತ್ತಿದೆ. ಅದರೊಂದಿಗೆ ಕೃಷಿ ಚಟುವಟಿಕೆ ಆರಂಭವಾಗಿದೆ. ಜೀವಜಲ ಸಾಕಷ್ಟು ಇದ್ದರೆ ಕೃಷಿಗೆ ಅನುಕೂಲ. ಆದರೆ ಈ ಬಾರಿ ಬೇಸಿಗೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜಲಕ್ಷಾಮ ಕಾಡಿದೆ. ಕೆರೆ ಬಾವಿಗಳು ತಳಕಂಡಿವೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ನೀರನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತನೆಯ ನಡುವೆ ಹಲವಾರು ಮಂದಿ ತಮ್ಮದಾದ ಪ್ರಯೋಗವನ್ನು ನಡೆಸುತ್ತಾ ಬಂದಿದ್ದಾರೆ. ಕೊಳವೆ ಬಾವಿಗೆ ಜಲ ಮರುಪೂರಣಕ್ಕೆ ಬಹಳಷ್ಟು ಮಂದಿ ಬೇರೆ ಬೇರೆ ವಿಧಾನವನ್ನು ಬಳಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನಂದಿಬೆಟ್ಟ ಎಂಬಲ್ಲಿಯ ಕೃಷಿಕರು ಹಾಗೂ ವೇಣೂರು ಎಸ್ ಡಿಎಮ್ ಐಟಿಐ ಕಾಲೇಜಿನ ಉಪನ್ಯಾಸಕ ಪೀಟರ್ ಸಿಕ್ವೇರಾ ಹಾಗೂ ವೇಣೂರು ಸಮೀಪದ ಮಾರಗುತ್ತು ಡಾ. ವಿಜಯರಾಜ ಅಧಿಕಾರಿಯವರು ತಮ್ಮ ಕೊಳೆವೆಬಾವಿಗಳಿಗೆ ಜಲಮರಪೂರಣಕ್ಕೆ ಸುಲಭ ಸೂತ್ರವನ್ನೇ ಅಳವಡಿಸಿಕೊಂಡಿದ್ದಾರೆ. ಇದರಿಂದ ಯಶಸ್ಸನ್ನು ಕಂಡಿದ್ದಾರೆ. ಈ ಸರಳ ಸೂತ್ರಕ್ಕೆ ಹೆಚ್ಚು ಖರ್ಚು ವೆಚ್ಚಗಳಿಲ್ಲದೆ ಕೊಳವೆ ಬಾವಿಯ ನೀರು ಬರಿದಾಗದಂತೆ ನೋಡಿಕೊಳ್ಳಬಹುದು. ಹರಿದು ಹೋಗಬಹುದಾದ ಕೆರೆ ಬಾವಿಯ ನೀರು ಸದುಪಯೋಗವಾಗುತ್ತದೆ. ಕೃಷಿಗೆ ಬೇಕಾದ ನೀರು ಲಭ್ಯವಾಗುತ್ತದೆ.

ಯಾವುದೇ ಶಕ್ತಿಯ ಬಳಕೆ ಮಾಡದೆ ಕೊಳವೆ ಬಾವಿಯ ಪಕ್ಕದಲ್ಲಿರುವ ಕೆರೆ ಬಾವಿಗಳಿಂದ ಕೊಳವೆ ಬಾವಿಗೆ ನೀರು ಮರುಪೂರಣ ಮಾಡುವ ಕ್ರಮ ಇಲ್ಲಿದೆ.

ಬೇಕಾದ ಸಲಕರಣೆಗಳು: ಅವಶ್ಯಕತಗೆ ಬೇಕಾದಷ್ಟು ಉದ್ದದ ಎರಡು ಇಂಚಿನ ಪಿವಿಸಿ ಪೈಪುಗಳು, 2 ಬೆಂಡುಗಳು, 2 ಖಿ, 2 ಗೇಟ್‌ವಾಲ್, 1ನಾನ್ ರಿಟನ್ಸ್ವಾಲ್, 1 ಪುಟ್‌ವಾಲ್

ಕೊಳವೆ ಬಾವಿಯಿಂದ ಹೊರಬರುವ ಡೆಲಿವರಿ ಪೈಪ್ ಎರಡು ಬೆಂಡುಗಳನ್ನು ಹಾದು ನೆಲದಲ್ಲಿ ಮುಂದುವರೆಯುವಾಗ ಕೆರೆ ಬಾವಿ ಸಂಪರ್ಕಕ್ಕೆ ಅನುಕೂಲವಾಗುವಂತೆ ಒಂದು ಖಿಯನ್ನು ಜೋಡಿಸಿ. ಖಿಯ ಇನ್ನೊಂದು ಭುಜಕ್ಕೆ ಆರು ಅಡಿ ದೂರದಲ್ಲಿ ಒಂದು ಗೇಟ್‌ವಾಲ್ ಜೋಡಿಸಿ. ಅಲ್ಲಿಂದ ಮುಂದೆ ಜೋಡಿಸಿದ ಕೃಷಿ ಭೂಮಿಯತ್ತ ಸಾಗಲಿ ಈಗ ಖಿಯ ಇನ್ನೊಂದು ಭುಜಕ್ಕೆ ಆರು ಅಡಿ ದೂರದಲ್ಲಿ ಇನ್ನೊಂದು ಗೇಟ್‌ವಾಲ್  ಅಳವಡಿಸಿ. ಅದರ ತುದಿಗೆ ಎರಡು ಇಂಚಿನ ಪಿವಿಸಿ ಪೈಪ್ ಜೋಡಿಸಬೇಕು. ಆದರೆ ತುದಿಯನ್ನು ಕೆರೆ/ಬಾವಿಗೆ ಮುಕ್ಕಾಲು ಭಾಗ ಇಳಿಸಬೇಕು. ಕೆರೆ ಬಾವಿಗೆ ಇಳಿಸಿದ ಪೈಪಿನ ತುದಿಗೆ ಒಂದು ಫುಟ್ವಾಲ್ ಜೋಡಿಸಬೇಕು. ಆದರೆ ಫುಟ್ವಾಲ್ ಜೋಡಿಸುವ ಮುಂಚೆ ಅದರ ನಾಲಿಗೆಯನ್ನು  ತೆಗೆಯಬೇಕು.

ಫುಟ್ವಾಲಿನ ಸುತ್ತಲೂ ನೈಲಾನ್ ಬಲೆಯನ್ನು ಕಟ್ಟಿ. ಈಗ ತಮ್ಮಲ್ಲಿರುವ ಕೆರೆ/ಬಾವಿ ನೀರಿನಿಂದ ತುಂಬಿದೆ. ಗೇಟ್‌ವಾಲ್-2 ನ್ನು ತೆರೆಯಿರಿ. ಹಾಗು . ಗೇಟ್‌ವಾಲ್-1 ಮುಚ್ಚಿರಿ. ಕೊಳವೆ ಬಾವಿಯ ಪಂಪ್ ಸ್ಟಾರ್ಟ್ ಮಾಡಿ. ಎರಡು ಮೂರು ಅಥವಾ ಐದು ನಿಮಿಷದ ಒಳಗೆ ಕೊಳವೆ ಬಾವಿಯ ನೀರು ಕೆರೆ/ಬಾವಿಯ ನೀರಿನ ಸಂಪರ್ಕಕ್ಕೆ ಬಂದಿರುವುದು ತಿಳಿಯಬಹುದು. ಆಕ್ಷಣ ಪಂಪನ್ನು ನಿಲ್ಲಿಸಿ. ಕೆರೆ/ಬಾವಿ ನೀರು ತನ್ನಿಂದ ತಾನೇ ಮೇಲಕ್ಕೆ ಬಂದು ಕೊಳವೆ ಬಾವಿಗೆ ಇಳಿಯುತ್ತದೆ .ಕೆರೆ/ಬಾವಿ ನೀರು ಮತ್ತೆ ಮತ್ತೆ ತುಂಬಿದಂತೆ ಈ ಕ್ರಮವನ್ನು ಮಾಡುತ್ತಾ ಬನ್ನಿ. ಕೊಳವೆ ಬಾವಿಯಲ್ಲಿ ಸಮೃದ್ಧ ನೀರು ತುಂಬಿ ಬೇಸಿಗೆ ಪೂರ್ತಿ ಕೃಷಿಗೆ ಉಪಯೋಗವಾಗುತ್ತದೆ. ಹೆಚ್ಚು ಖರ್ಚು ವೆಚ್ಚಗಳಿಲ್ಲದೆ ನೀರಿನ ಸಮಸ್ಯೆಯನ್ನು ನೀಗಿಸಿಕೊಳ್ಳಬಹುದು. ಕೊಳವೆ ಬಾವಿ ಇದ್ದು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವವರು ಈ ರೀತಿಯ ಜಲ ಮರುಪೂರಣ ಮಾಡಿಕೊಳ್ಳಬಹುದು.

ಮಾಹಿತಿ: ಎಂ. ವಿಜಯರಾಜ ಅಧಿಕಾರಿ ಮಾರಗುತ್ತು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group